ಅನುಭವಿ ಸಹೃದಯಿ ಭಾಗವತ ಶ್ರೀನಿವಾಸ ಬಳ್ಳಮಂಜ
ಫೋಟೋ ಕೃಪೆ: ಶ್ರೀ ಮಧುಸೂದನ ಅಲೆವೂರಾಯ ಶ್ರೀ ಶ್ರೀನಿವಾಸ ಬಳ್ಳಮಂಜ ಅವರು ಕಟೀಲು ಮೇಳದ ಭಾಗವತರು. ಪ್ರಸ್ತುತ ಕಟೀಲು ನಾಲ್ಕನೇ ಮೇಳದಲ್ಲಿ ಪ್ರಧಾನ ಭಾಗವತರಾಗಿ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಯಕ್ಷಗಾನದಲ್ಲಿ ಭಾಗವತ ಸ್ಥಾನದ ಹೊಣೆಗಾರಿಕೆಯು ವಿಶಾಲವಾದುದು. ನಾಲ್ಕಾರು ಪದ್ಯಗಳನ್ನು ಹೇಳಿದವರು ಭಾಗವತರಾಗಲಾರರು. ಯಶಸ್ವಿ ಪ್ರದರ್ಶನಕ್ಕೆ ಬೇಕಾದ ಅಂಶಗಳನ್ನೆಲ್ಲಾ ಅವನು ತಿಳಿದಿರಬೇಕು. ತೆಂಕು ತಿಟ್ಟಿನ ಹಿರಿಯ ಭಾಗವತರಾದ ಕುರಿಯ ಶ್ರೀ ಗಣಪತಿ ಶಾಸ್ತ್ರಿಗಳು ಪ್ರದರ್ಶನ ಮುಗಿದ ಮೇಲೆ ಆಟ ಹೇಗಾಗಿದೆ? ಎಂದು ಕೇಳುತ್ತಿದ್ದರು. ಪ್ರದರ್ಶನವು ಚೆನ್ನಾಗಿರಬೇಕೆಂಬ ತುಡಿತವು ಅವರಿಗಿತ್ತು. ಕಲಾವಿದರು ನಿಮ್ಮ ಪದ್ಯ ಚೆನ್ನಾಗಿತ್ತು ಎಂದು ಹೇಳಿದರೆ, 'ನೀವು ಚೆನ್ನಾಗಿ ದುಡಿದಿರಿ,ಆದ ಕಾರಣ ನನ್ನ ಪದ್ಯ ಒಳ್ಳೆಯದಾಯಿತು" ಎಂದು ಹೇಳುತ್ತಿದ್ದರು. ಯಕ್ಷಗಾನವು ಸ್ವಪ್ರತಿಷ್ಠೆಗಾಗಿ ಇರುವ ವೇದಿಕೆಯಲ್ಲ, ಕಲಾವಿದರು ತಂಡವಾಗಿ ಮುನ್ನಡೆದು ಪ್ರದರ್ಶನದ ಗೆಲುವಿಗೆ ಕಾರಣರಾಗಬೇಕು ಎಂಬ ಸಂದೇಶವು ಇದರಲ್ಲಿದೆ. "ಭಾಗವತನು ಯಶಸ್ವೀ ಪ್ರದರ್ಶನದ ಶ್ರೇಯಸ್ಸನ್ನು ಪಡೆಯುವುದರ ಜತೆಗೆ ಸೋಲಿನ ಹೊಣೆಯನ್ನೂ ಹೊರಬೇಕು. ಸೋಲಿಗಾಗಿ ಮತ್ತೊಬ್ಬರ ಕಡೆಗೆ ಬೆರಳು ತೋರಿಸಬಾರದು'' ಇದು ಉಭಯ ತಿಟ್ಟುಗಳ ಖ್ಯಾತ ಭಾಗವತ ಕೀರ್ತಿಶೇಷ ಕಡತೋಕಾ ಮಂಜುನಾಥ ಭಾಗವತರ ಮಾತುಗಳು. ಇದರಿಂದ ಯಕ್ಷಗಾನದಲ್ಲಿ ಭಾಗವತನ ಸ್ಥಾನ, ಹೊಣೆಗಳೇನು ಎಂಬುದನ್ನು ಅರ್ಥ ಮಾಡ...