ಯಕ್ಷಗಾನ ಕಲಾರಂಗ (ರಿ.) ಉಡುಪಿ ಸಂಸ್ಥೆಗೆ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನ ಪ್ರಶಸ್ತಿ

                               ಗಂಡುಕಲೆ ಎಂದೇ ಪ್ರಸಿದ್ಧವಾದ ಯಕ್ಷಗಾನವನ್ನು ಉಳಿಸಿ ಬೆಳೆಸುವುದಕ್ಕಾಗಿ, ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಚಿಗುರೊಡೆದ ಸಂಸ್ಥೆಯೇ ಯಕ್ಷಗಾನ ಕಲಾರಂಗ (ರಿ.) ಉಡುಪಿ. ಈ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ಕಲಾವಿದರಿಗೆ ನೆರಳನ್ನು ನೀಡುತ್ತಿದೆ. ಈಗಿನಂತೆ ವಾಹನ ಸೌಕರ್ಯ, ಮಾಧ್ಯಮಗಳಿಲ್ಲದ ಕಾಲ. ಪ್ರದರ್ಶನ ಗಳ ಸಂಖ್ಯೆಯೂ ಆಗ ತೀರಾ ವಿರಳ. ಆದರೂ ಅದೆಷ್ಟೇ ಕಲಾವಿದರು ನಡೆದುಕೊಂಡೇ ಸಾಗಿ ಕಷ್ಟಪಟ್ಟು ಕಲಾಮಾತೆಯ ಸೇವೆಯನ್ನು ಮಾಡಿದರು. ಸಂಘಟಕರು, ದಾನಿಗಳು, ಕಲಾಭಿಮಾನಿಗಳು ಸಹಕರಿಸಿದರು. ಭಕ್ತಿಯು ಪರಮಾವಧಿಗೇರಿದಾಗ ಪರಮಾತ್ಮನು ಪ್ರಸನ್ನನಾಗುತ್ತಾನೆ ಎಂಬ ಮಾತು ನಿಜಕ್ಕೂ ಸತ್ಯ. ಇವರೆಲ್ಲರ ಕಷ್ಟವನ್ನು ಕಂಡು ಕಲಾಮಾತೆಯ ಮನಸ್ಸು ಕರಗಿರಬೇಕು. ಭಕ್ತಿಪೂರ್ವಕ, ಕಷ್ಟಪಟ್ಟು ಮಾಡಿದ ಸೇವೆಯಿಂದ ಮಹಾತಾಯಿಯು ಸಂತೋಷಗೊಂಡಿರಬೇಕು. ಅನುಗ್ರಹಿಸೋಣ ಎಂಬ ನಿರ್ಣಯಕ್ಕೆ ಬಂದಿರಬೇಕು. ಯಕ್ಷಗಾನ ಕಲಾರಂಗ (ರಿ.) ಉಡುಪಿ ಎಂಬ ಶ್ರೇಷ್ಠ ಸಂಸ್ಥೆಯ ಹುಟ್ಟಿಗೆ ಅವಳೇ ಪ್ರೇರಕ ಶಕ್ತಿಯಾಗಿರಬೇಕು. ಅಲ್ಲಾ ಕಲಾವಿದರ, ಕಲಾವಿದ ರಾಗಬೇಕೆಂದು ಹಂಬಲಿಸುವ ಎಳೆಯರ ಸೌಭಾಗ್ಯವೋ? 1975ನೇ ಇಸವಿ ಈ ಸಂಸ್ಥೆಯು ಲೋಕಾರ್ಪಣೆಗೊಂಡಿತ್ತು. ಇಲ್ಲಿಯ ವರೇಗೆ ಯಕ್ಷಗಾನ ಮತ್ತು ಕಲಾವಿದರಿಗಾಗಿ ಸಂಸ್ಥೆಯೊಂದು ಹುಟ್ಟಿ ಕಾರ್ಯಾಚರಿಸದೇ ಇದ್ದುದು ವಿಚಿತ್ರವಾದರೂ ಸತ್ಯ!
                     ಯಕ್ಷಗಾನ ಕಲೆಯನ್ನು ಪ್ರೀತಿಸಿ ಗೌರವಿಸುವ, ಅದರ ನಿಜ ಸೌಂದರ್ಯವು ಕೆಡದಂತೆ ಕಾಪಿಡಬೇಕು, ಕಲಾವಿದರು ಉತ್ತಮ, ನೆಮ್ಮದಿಯ ಜೀವನ ನಡೆಸಬೇಕೆಂಬ ತುಡಿತವನ್ನು ಹೊಂದಿರುವ ಸಮಾನಮನಸ್ಕರೆಲ್ಲಾ ಸೇರಿ ಹುಟ್ಟುಹಾಕಿದ ಸಂಸ್ಥೆಯೇ ಯಕ್ಷಗಾನ ಕಲಾರಂಗ (ರಿ.) ಉಡುಪಿ. ತೆಂಕು, ಬಡಗು ಎಂಬ ಭೇದವಿಲ್ಲದೆ ಕಲೆಯು ಉಳಿಯಬೇಕು. ಕಲಾವಿದರ ಬಾಳು ಹಸನಾಗಬೇಕು ಎಂಬುದೇ ಈ ಮೇರು ಸಂಸ್ಥೆಯ ಮೂಲ ಉದ್ದೇಶ. ಈ ಯಕ್ಷಗಾನ ಕಲಾರಂಗ ಎಂಬ ಸಂಸ್ಥೆಯು ಚಿಗುರೊಡೆಯಲು ಕಾರಣರಾದವರೆಲ್ಲಾ ಅಭಿನಂದನೀಯರು, ಅಭಿವಂದನೀಯರು. ಕಲಾಕ್ಷೇತ್ರಕ್ಕೆ ಅತ್ಯುತ್ತಮವಾದ ಕೊಡುಗೆಯು ಕೊಡಲ್ಪಟ್ಟಿತು. ಅನುಪಮ ಕೊಡುಗೆಗಳನ್ನು ನೀಡಿ ಯಕ್ಷಗಾನದ ‘ಸೀಮಾಪುರುಷ’ ಎಂದೇ ಪ್ರಸಿದ್ಧರಾದ ಕೋಟ ಶಿವರಾಮ ಕಾರಂತರು 1975ನೇ ಇಸವಿ ಯಕ್ಷಗಾನ ಕಲಾರಂಗ (ರಿ.) ಉಡುಪಿ ಈ ಸಂಸ್ಥೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರಯಿಸಿದ್ದರು. ಶಿಶುವು ಜನಿಸಿದ ತಕ್ಷಣ ನಡೆಯಲಾರದು. ಮಾತನಾಡಲಾರದು. ತಾಯಿಯ ಆರೈಕೆಯು ಬೇಕೇ ಬೇಕು. ತಾಯಿಯು ಮೊಲೆಯುಣಿಸುತ್ತಾಳೆ, ಮಾತು ಕಲಿಸುತ್ತಾಳೆ. ನಡೆಯಲು ಕಲಿಸುತ್ತಾಳೆ. ಕಲಾರಂಗ ಎಂಬ ಕೂಸಿಗೆ ತಾಯಿಯಂತೆ ಸಹಕರಿಸಿ ಬೆಳೆಯಲು ಕಾರಣರಾದ ಮಹನೀಯರುಗಳು ಪ್ರಶಂಸನೀಯರು. 43 ವಸಂತಗಳನ್ನು ಪೂರೈಸಿ, ಈ ಅವಧಿಯುದ್ದಕ್ಕೂ ಯಕ್ಷಗಾನಕ್ಕಾಗಿ ಮತ್ತು ಕಲಾವಿದರಿಗಾಗಿ ಜನಮೆಚ್ಚುವಂತೆ ಕಾರ್ಯಾಚರಿಸುತ್ತಾ ಸಾಗುತ್ತಿದೆ. ಅಡಿಪಾಯ ಭದ್ರವಾಗಿದ್ದರೆ ಮಾತ್ರ ಭವನವು ದೃಢವಾಗಿ ಅನೇಕ ವರ್ಷಗಳ ಕಾಲ ನಾಶವಾಗದೆ ಉಳಿಯಬಲ್ಲುದು. ಯಕ್ಷಗಾನ ಕಲಾರಂಗದ ಯೋಜನೆ ಯೋಚನೆಗಳೆಲ್ಲಾ ಸ್ವಚ್ಛ ಮತ್ತು ಪ್ರಾಮಾಣಿಕ. ಅದುವೇ ಈ ಸಂಸ್ಥೆಯ ಭದ್ರವಾದ ಪಂಚಾಂಗ. ಅಲ್ಲದೆ ಪ್ರತಿಫಲಾಪೇಕ್ಷೆ ಇಲ್ಲದೆ ಅನೇಕ ಮಹನೀಯರುಗಳು ಈ ಸಂಸ್ಥೆಯಲ್ಲಿ ದುಡಿಯುತ್ತಿದ್ದಾರೆ. ಕಾರ್ಯಬಾಹುಳ್ಯವಿದ್ದರೂ ಬದಿಗೆ ಸರಿಸಿ, ಇದು ನಮ್ಮ ಮನೆಯ ಕೆಲಸ, ಕಲೆ ಮತ್ತು ಕಲಾವಿದರಿಗಾಗಿ ನಾವೂ ಸಮಯವನ್ನು ಕೊಡೋಣ ಎಂದು ನಿರ್ಧರಿಸಿ ವ್ಯವಹರಿಸುವ ಅವರುಗಳೆಲ್ಲಾ ಕಲಾಮಾತೆಯ ಸುಪುತ್ರರು. ಅಭಿನಂದನೀಯರು.
                                               ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ
                      ಯಕ್ಷಗಾನ ಕಲಾರಂಗ (ರಿ.) ಉಡುಪಿ ಈ ಸಂಸ್ಥೆಯು ನಡೆಸುತ್ತಿರುವ ಅನನ್ಯ ಕಲಾಸೇವೆಗಾಗಿ, ಸದ್ರಿ ಸಂಸ್ಥೆಗೆ, ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ನುಡಿಗೌರವವನ್ನು ಸಲ್ಲಿಸಿ ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಪ್ರಶಸ್ತಿ ಯನ್ನು ನೀಡಿ ಗೌರವಿಸಲಿದೆ. (21-10-2018 ಭಾನುವಾರ. ಮಂಗಳೂರು ಪುರಭವನದಲ್ಲಿ) ಯಕ್ಷಗಾನ ಕಲಾರಂಗ (ರಿ.) ಉಡುಪಿ ಮತ್ತು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನಕ್ಕೆ ಅಭಿನಂದನೆಗಳು. ಶುಭಾಶಯಗಳು. ಉಭಯ ಸಂಸ್ಥೆಗಳಿಂದ ಕಲೆ ಮತ್ತು ಕಲಾವಿದರಿಗಾಗಿ ಇನ್ನಷ್ಟು ಕೊಡುಗೆಗಳು ನೀಡುವಂತಾಗಲಿ. ಶ್ರೀ ದೇವರ ಅನುಗ್ರಹವು ಸದಾ ಇರಲಿ ಎಂದು ಕಲಾಭಿಮಾನಿಗಳ ಪರವಾಗಿ ಶುಭ ಹಾರಯಿಕೆಗಳು.
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ :
ಸಿರಿಬಾಗಿಲು ವೆಂಕಪ್ಪಯ್ಯನವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅನುಪಮವಾದ ಕೊಡುಗೆಗಳನ್ನು ನೀಡಿದವರು. ಗಡಿನಾಡ ಪ್ರದೇಶ ಕಾಸರಗೋಡಿನಲ್ಲಿ ಕನ್ನಡದ ಕಂಪನ್ನು ಉಳಿಸಿ ಬೆಳೆಸಲು ಪ್ರಯತ್ನಿಸಿದ ಪ್ರಮುಖರಲ್ಲೊಬ್ಬರು. ಕೇರಳ ರಾಜ್ಯದ ಕನ್ನಡ ಪಠ್ಯಪುಸ್ತಕದಲ್ಲಿ ಅನೇಕ ವರ್ಷಗಳ ಕಾಲ ಅಸ್ತಿತ್ವದಲ್ಲಿದ್ದ ಪುಳ್ಕೂರು ಬಾಚನ ಐತಿಹಾಸಿಕ ಕಥಾನಕಕ್ಕೆ ಇವರು ಕಾರಣಕರ್ತರು. ಸಾರಸ್ವತ ಲೋಕಕ್ಕೆ ಇವರ ಕೊಡುಗೆ ಅಪಾರ. ಕಲಾ, ಸಾಹಿತ್ಯ ಚಟುವಟಿಕೆಗಳನ್ನು ನಡೆಸಿ, ದಾಖಲೀಕರಿಸಿ ಅದನ್ನು ಮುಂದಿನ ಪೀಳಿಗೆಗೆ ನೀಡುವ ಮಹದುದ್ದೇಶದಿಂದ ಇವರ ಹೆಸರಿನಲ್ಲಿ ಸ್ಥಾಪಿತವಾದ ಸಂಸ್ಥೆಯೇ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.). ಕಳೆದ 5 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕಾರ್ಯಾಚರಿಸುತ್ತಿದೆ. ತೀರ್ಥರೂಪರ ಹೆಸರಿನಲ್ಲಿ ಈ ಸಂಸ್ಥೆಯನ್ನು ರೂಪಿಸಿದ ಧರ್ಮಸ್ಥಳ ಮೇಳದ ಭಾಗವತರಾದ ಶ್ರೀ ರಾಮಕೃಷ್ಣ ಮಯ್ಯರು ಕರ್ಮಪುತ್ರರೆನಿಸಿಕೊಂಡರು. ಸರ್ವರ ಸಹಕಾರದಿಂದ ನನಗಿದು ಸಾಧ್ಯವಾಯಿತು ಎನ್ನುವ ಮಯ್ಯರು ಅವರೆಲ್ಲರಿಗೂ ಕೃತಜ್ಞರಾಗಿದ್ದಾರೆ.
                                                               ಶ್ರೀ ರಾಮಕೃಷ್ಣ ಮಯ್ಯ

               ಈ ವರೇಗೂ ರಂಗಪ್ರಸಂಗ, ಅರ್ಥಾಂತರಂಗ, ಯಕ್ಷ ಕಾವ್ಯಾಂತರಂಗ, ಪೂರ್ವರಂಗ ಪ್ರದರ್ಶನ, ಪರಂಪರೆಯ ಹಳೆಯ ಪ್ರಸಂಗಗಳ ಪ್ರದರ್ಶನಗಳನ್ನು ನಡೆಸಿ ದಾಖಲೀಕರಿಸಿ ಮುಂದಿನ ತಲೆಮಾರಿಗೆ ತಲುಪಿಸುವ ಕಾರ್ಯ ಮಾಡಿದ್ದಾರೆ. ಸಮಗ್ರ ಯಕ್ಷಗಾನ ತರಬೇತಿ ಕೇಂದ್ರ, ಗ್ರಂಥಾಲಯ, ಮ್ಯೂಸಿಯಂಗಳನ್ನು ಒಳಗೊಂಡ ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಭವನವನ್ನು ನಿರ್ಮಿಸಿ, ಕೇರಳದ ಕಾಸರಗೋಡಿನಲ್ಲಿ ಕನ್ನಡಪರ ಕಾರ್ಯಕ್ರಮಗಳನ್ನು, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಯೋಜನೆಯನ್ನು ಹೊಂದಿದ್ದಾರೆ. ಅವರ ಯೋಜನೆಗಳೆಲ್ಲಾ ಸಾಕಾರಗೊಳ್ಳಲಿ. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು, ಯಕ್ಷಗಾನ ಕಲಾರಂಗ (ರಿ.) ಉಡುಪಿ ಸಂಸ್ಥೆಗೆ ನುಡಿಗೌರವವನ್ನು ಸಲ್ಲಿಸಿ ಪ್ರತಿಷ್ಠಾನ ಪ್ರಶಸ್ತಿಯನ್ನು ನೀಡುವ ಕಾರ್ಯಕ್ರಮ ಸುಂದರವಾಗಿ ಮೂಡಿಬರಲಿ ಎಂದು ಕಲಾಭಿಮಾನಿಗಳೆಲ್ಲರ ಹಾರಯಿಕೆಗಳು.

Comments

Popular posts from this blog

ರಂಗನಿಷ್ಠೆ, ಅರ್ಪಣಾಭಾವದ ಯಕ್ಷತಾರೆ ಕಾಸರಗೋಡು ಸುಬ್ರಾಯ ಹೊಳ್ಳ

ಬಡಗಿನ ಅನುಭವೀ ಕಲಾವಿದ, ಸಂಘಟಕ - ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ 

ದಿಗ್ವಿಜಯಕ್ಕೆ ಸಜ್ಜಾಗಿರುವ ಮೇಳಗಳಿಗೆ ಮತ್ತು ಕಲಾವಿದರುಗಳಿಗೆ ಶುಭಾಶಯಗಳು