ಬಣ್ಣದ ವೇಷಧಾರಿ - ಶಿವರಾಮ ಶೆಟ್ಟಿ, ಜೋಗಿಮಕ್ಕಿ

       ಯಕ್ಷಗಾನವು ಕರಾವಳೀ ಮತ್ತು ಮಲೆನಾಡ ಪ್ರದೇಶಗಳಲ್ಲಿ ಹೆಚ್ಚಾಗಿ ಪ್ರದರ್ಶನಗೊಳ್ಳುವ ನಮ್ಮ ಹೆಮ್ಮೆಯ ಕಲೆ. ಗಂಡುಕಲೆಯೆಂದೇ ಪ್ರಸಿದ್ಧವಾಗಿದೆ. ಪ್ರಸ್ತುತ ದೇಶ ವಿದೇಶಗಳಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಬೇಸಿಗೆಯಲ್ಲಿ ಅನೇಕ ಮೇಳಗಳ ಪ್ರದರ್ಶನಗಳನ್ನೂ, ಮಳೆಗಾಲದಲ್ಲಿ ಅಲ್ಲಲ್ಲಿ ನಡೆಯುವ ಪ್ರದರ್ಶನಗಳನ್ನೂ ನೋಡಿ ಕಲಾಭಿಮಾನಿಗಳು ಸಂತೋಷಪಡುತ್ತಿದ್ದಾರೆ. ಅನೇಕ ಕಲಾವಿದರು ಇಂದು ಕಲಾಸೇವೆಯನ್ನು ಮಾಡುತ್ತಿದ್ದಾರೆ. ವೃತ್ತಿಕಲಾವಿದರಾಗಿ, ಹವ್ಯಾಸಿಗಳಾಗಿ ಅನೇಕ ಕಲಾವಿದರಿಂದು ಯಕ್ಷಗಾನದಲ್ಲಿ ಗುರುತಿಸಿಕೊಂಡಿದ್ದಾರೆ. ಸಾಧನೆಯ ಮೂಲಕ ಹಲವರು ಪ್ರಸಿದ್ಧಿಯನ್ನು ಪಡೆದಿದ್ದಾರೆ. ಹಲವರು ತೆರೆಮರೆಯ ಕಾಯಿಯಾಗಿ ಉಳಿದುಕೊಂಡಿದ್ದಾರೆ. ಪ್ರಸಿದ್ಧಿ, ಪ್ರತಿಫಲ ದೇವರು ನೀಡಬೇಕು. ನಾನು ಕರ್ತವ್ಯವನ್ನಷ್ಟೇ ಮಾಡುತ್ತಿದ್ದೇನೆ ಎಂದು ಭಾವಿಸಿ ವ್ಯವಹರಿಸುವ ಕಲಾವಿದರನೇಕರು. ಎಲ್ಲರೂ ಕಲಾಮಾತೆಯ ಸುಪುತ್ರರು. ಪ್ರಾಮಾಣಿಕತೆಯಿಂದ, ನಿಷ್ಠೆಯಿಂದ ಅಭಿನಯಿಸಿದರೆ ಕಲಾಮಾತೆ ನಿಸ್ಸಂಶಯವಾಗಿಯೂ ಅನುಗ್ರಹಿಸುತ್ತಾಳೆ ಖಂಡಿತ. ಹೀಗೆ ಭಾವಿಸಿಕೊಂಡು ಕಲಾಸೇವೆಯನ್ನು ಮಾಡುತ್ತಿರುವವರಲ್ಲಿ ಶ್ರೀ ಶಿವರಾಮ ಶೆಟ್ಟರೂ ಒಬ್ಬರು. ಇವರು ಕಟೀಲು ಮೇಳದ ಕಲಾವಿದ.
ಶ್ರೀ ಶಿವರಾಮ ಶೆಟ್ಟಿ, ಜೋಗಿಮಕ್ಕಿ

                   ಶ್ರೀ ಶಿವರಾಮ ಶೆಟ್ಟರ ಕುಟುಂಬಿಕರ ಮೂಲಮನೆ ಕಟೀಲು ಸಮೀಪದ ದೊಡ್ಡಿಕಟ್ಟೆ. 500 ವರ್ಷಗಳ ಹಿಂದೆ ಇಲ್ಲಿಂದ ಘಟ್ಟಪ್ರದೇಶಕ್ಕೆ ವಲಸೆ ಹೋಗಿದ್ದರಂತೆ. ಹಾಗಾಗಿ ಕಟೀಲು ಮೇಳದ ತಿರುಗಾಟದಲ್ಲಿ ನನಗೆ ನೆಮ್ಮದಿಯಿದೆ ಎಂಬುದು ಶಿವರಾಮ ಶೆಟ್ರ ಅಭಿಪ್ರಾಯ.
                   ಶ್ರೀ ಶಿವರಾಮ ಶೆಟ್ಟಿ ಜೋಗಿಮಕ್ಕಿ ಇವರು ಪ್ರಸ್ತುತ ಕಟೀಲು ಮೇಳದ ಕಲಾವಿದ. ಇವರು ಬಣ್ಣದ ವೇಷಧಾರಿ. ಇವರು ತಿಮ್ಮಪ್ಪ ಶೆಟ್ಟಿ, ಕಾವೇರಿ ದಂಪತಿಗಳಿಗೆ ಮಗನಾಗಿ ಹೊಸನಗರ ತಾಲೂಕು ನಾಗರಕೊಡಿಗೆ ಎಂಬಲ್ಲಿ ಜನಿಸಿದರು. (01-01-1952) ಎಳವೆಯಲ್ಲಿ ತಾಯಿಯನ್ನು ಕಳೆದುಕೊಂಡ ಶಿವರಾಮ ಶೆಟ್ರು ತಂದೆಯ ಆಸರೆಯಲ್ಲಿ ಬೆಳೆದವರು. ತಂದೆ ಮತ್ತು ತಮ್ಮ (ಶೇಖರ ಶೆಟ್ಟಿ)ನ ಜತೆ ಕೂಲಿಕೆಲಸವನ್ನು ಮಾಡುತ್ತಾ ಜೀವನ ಸಾಗಿಸಿದವರು. ಹುಟ್ಟೂರು ನಾಗರಕೊಡಿಗೆಯನ್ನು ಬಿಟ್ಟು ಹಲವೂರುಗಳಲ್ಲಿ ಕೂಲಿನಾಲಿ ಮಾಡಿ ಬದುಕಿದ ಶಿವರಾಮ ಶೆಟ್ರಿಗೆ 20ನೇ ವಯಸ್ಸಿನಲ್ಲಿ ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆ ಮೂಡಿತಂತೆ. ಮರಳಿ ನಾಗರಕೊಡಿಗೆಗೆ ಬಂದು ನಾಟ್ಯವನ್ನು ಕಲಿತರು. ನಾಗರಕೊಡಿಗೆ ಮೇಳದಲ್ಲಿ 2 ವರ್ಷ ತಿರುಗಾಟ. ಕೋಡಂಗಿ, ಬಾಲಗೋಪಾಲರ ವೇಷಗಳನ್ನು ಮಾಡುವಾಗ ಮೇಳದ ಯಜಮಾನರಾದ ಶ್ರೀ ರಾಮಕೃಷ್ಣಯ್ಯನವರು- ನೀನು ಕಲಾವಿದನಾಗಲು ನಾಲಾಯಕ್ ಎಂದು ಗದರಿಸಿದ್ದರಂತೆ. ಅದು ಒಳಿತೇ ಆಯಿತು. ನನಗದು ಪಾಠ. ನಾನು ಛಲದಿಂದ ಕಲಿತೆ. ಅವರೇ ನನಗೆ ಪ್ರೇರಕರು. ನಾನು ಕಲಾವಿದನಾದುದನ್ನು ನೋಡಿ, ಗದರಿಸಿದ ಅವರೇ ಸಂತೋಷದಿಂದ ಅಭಿನಂದಿಸಿದ್ದಾರೆ ಎಂದು ಶಿವರಾಮ ಶೆಟ್ರು ಅಂದಿನ ದಿನಗಳನ್ನು ನೆನಪಿಸುತ್ತಾರೆ. 1974ರಲ್ಲಿ ಶಿವರಾಮ ಶೆಟ್ರು ಪೆರ್ಡೂರು ಮೇಳಕ್ಕೆ ಸೇರಿದರು. ಆ ಸಮಯದಲ್ಲಿ ಶಿವರಾಮ ಶೆಟ್ರ ತಂದೆಯವರೂ ತೀರಿಕೊಂಡರು. ಪೆರ್ಡೂರಿನಲ್ಲಿ 3 ತಿರುಗಾಟ ಅನಂತರ ಗೋಳಿಗರಡಿ ಮೇಳದಲ್ಲಿ 1 ತಿರುಗಾಟ ಮಾಡಿದ ಇವರು ಮತ್ತೆ ಕಮಲಶಿಲೆ ಮೇಳದಲ್ಲಿ ಬಣ್ಣದ ವೇಷಧಾರಿಯಾಗಿ ಕಲಾಸೇವೆಯನ್ನು ಮಾಡಿದರು. ಮತ್ತೆ 1 ವರ್ಷ ಸಾಲಿಗ್ರಾಮ ಮೇಳದಲ್ಲಿ; ಅಲ್ಲಿಂದ 8 ವರ್ಷಗಳ ಕಾಲ ಕಟೀಲು ಮೇಳದಲ್ಲಿ ಮತ್ತೆ ಬಡಗಿನ ಬಗ್ಪಾಡಿ ಮಂದಾರ್ತಿ ಅಮೃತೇಶ್ವರೀ ಮೇಳಗಳಲ್ಲಿ ದುಡಿದು ಕೆಲವು ವರ್ಷಗಳಿಂದ ಯಕ್ಷಗಾನದಿಂದ ಅನಿವಾರ್ಯ ಕಾರಣಗಳಿಂದ ದೂರ ಉಳಿದರು. ಜೀವನೋಪಾಯಕ್ಕಾಗಿ ಅಡಿಕೆ ತೋಟದಲ್ಲಿ ಔಷಧಿ ಸಿಂಪಡಿಸುವ, ಗೊನೆ ತೆಗೆಯುವ ಕೆಲಸವನ್ನೂ ಕೆಲವು ವರ್ಷಗಳ ಕಾಲ ಮಾಡಿದ್ದರು. ಅಡಿಕೆ ಮರದಿಂದ (ಕೊನೆ ತೆಗೆಯುವಾಗ) ಬಿದ್ದು ಕೈಗೆ ತಾಗಿದ ಕಾರಣ ಮರ ಏರಲು ಆಗದೆ ಆ ಕೆಲಸವನ್ನೂ ಬಿಡಬೇಕಾಯಿತು. ಎಳವೆಯಲ್ಲೆ ತನಗಿಷ್ಟವಾದ ಯಕ್ಷಗಾನವನ್ನೇ ಅವಲಂಬಿಸಿದರು ಶಿವರಾಮ ಶೆಟ್ರು. ಪ್ರಸ್ತುತ ಕೆಲವು ವರ್ಷಗಳಿಂದ ಕಟೀಲು ಮೇಳದಲ್ಲಿ ಬಣ್ಣದ ವೇಷಧಾರಿಯಾಗಿ ವ್ಯವಸಾಯ ಮಾಡುತ್ತಿದ್ದಾರೆ. ಪತ್ನಿ ಮತ್ತು ಮಕ್ಕಳೊಂದಿಗೆ ಪ್ರಸ್ತುತ ನರಸಿಂಹರಾಜಪುರ ತಾಲೂಕು ಜೋಗಿಮಕ್ಕಿಯಲ್ಲಿ ವಾಸಿಸುತ್ತಿದ್ದಾರೆ. ಕಲಾಮಾತೆಯ ಸೇವೆಯನ್ನು ಮಾಡುವಲ್ಲಿ ಶಿವರಾಮ ಶೆಟ್ರಿಗೆ ದೇವರು ಆರೋಗ್ಯವನ್ನು ನೀಡಲಿ. ಅವರ ಇಷ್ಟಾರ್ಥಗಳನ್ನು ಅನುಗ್ರಹಿಸಲಿ ಎಂಬ ಹಾರೈಕೆಗಳೊಂದಿಗೆ-

- ರವಿಶಂಕರ್ ವಳಕ್ಕುಂಜ

Comments

Popular posts from this blog

ರಂಗನಿಷ್ಠೆ, ಅರ್ಪಣಾಭಾವದ ಯಕ್ಷತಾರೆ ಕಾಸರಗೋಡು ಸುಬ್ರಾಯ ಹೊಳ್ಳ

ಬಡಗಿನ ಅನುಭವೀ ಕಲಾವಿದ, ಸಂಘಟಕ - ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ 

‘ನಾದಲೋಕದ ಗುರಿಕಾರ’ ಶ್ರೀ ನೆಡ್ಲೆ ನರಸಿಂಹ ಭಟ್