ಯಕ್ಷಗಾನ ಕಲಾರಂಗ ಉಡುಪಿ (ರಿ)

{ವಿ.ಸೂ: ಇದು ಜೂನ್ 2016ರಲ್ಲಿ ಬರೆದ ಲೇಖನ. ಅದರಿಂದೀಚೆಗೆ ಆದ ಬೆಳವಣಿಗೆಗಳನ್ನು ಈ ಲೇಖನದಲ್ಲಿ ಸೇರಿಸಲಾಗಿಲ್ಲ}

ಯಕ್ಷಗಾನ ಕಲಾವಿದರಿಗಾಗಿ, ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಸ್ಥಾಪಿಸಲ್ಪಟ್ಟ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಪಡೆದ ಸಂಸ್ಥೆಯೇ ‘ಯಕ್ಷಕಲಾರಂಗ ಉಡುಪಿ (ರಿ)’. ಅನೇಕ ಮಹನೀಯರು ಪ್ರತಿಫಲಾಪೇಕ್ಷೆ ಇಲ್ಲದೆ ಕಲಾವಿದರ ಶ್ರೇಯಸ್ಸನ್ನೇ ಬಯಸಿ ಅವಿರತ ಶ್ರಮಿಸುತ್ತಿದ್ದಾರೆ. ಯಕ್ಷಗಾನವು ಗಂಡುಕಲೆಯೆಂದೇ ಪ್ರಸಿದ್ಧವಾಗಿದ್ದರೂ ಕಲೆಯ ಉಳಿವಿಗೆ ಕಲೆಗಾಗಿ ಕೊಡುಗೆ ನೀಡುವ, ಕಲಾವಿದರ ಶ್ರೇಯಸ್ಸಿಗಾಗಿ ಒಂದೇ ಒಂದು ಸಂಸ್ಥೆಯು ಇದಕ್ಕೆ ಮೊದಲು ಚಿಗುರೊಡೆಯದೇ ಇದ್ದುದು ವಿಪರ್ಯಾಸ. ಆದುದರಿಂದ ‘ಯಕ್ಷಕಲಾರಂಗ’ ಎಂಬ ಈ ಮೇರು ಸಂಸ್ಥೆಯ ಹುಟ್ಟಿಗೆ ಕಾರಣರಾದವರು ಅಭಿನಂದನಾರ್ಹರು, ಪ್ರಾತಃಸ್ಮರಣೀಯರು. ಕಲಾವಿದರ ಬಾಳು ಬಂಗಾರವಾಗಲು ಕಾಣಿಸಿಕೊಂಡ ಮೊದಲ ಸಂಸ್ಥೆ ಎಂಬ ಹಿರಿಮೆ, ಗರಿಮೆ ಯಾವಾಗಲೂ ‘ಯಕ್ಷಕಲಾರಂಗ’ಕ್ಕೆ ಶಾಶ್ವತವಾಗಿರುತ್ತದೆ.
1975ನೇ ಇಸವಿಯಲ್ಲಿ ಉಡುಪಿಯಲ್ಲಿ ಪ್ರಾರಂಭವಾದ ಈ ಸಂಸ್ಥೆ ಇಂದು ಬೃಹತ್ ಎತ್ತರಕ್ಕೆ ಬೆಳೆದು ಕೀರ್ತಿಯನ್ನು ಪಡೆದಿದೆ. ಕಲಾವಿದರಿಗೆ ಅತ್ಯಗತ್ಯವಾದ ಪ್ರಯೋಜನಗಳನ್ನು ಪಡೆಯುವಂತಹಾ, ಇಳಿವಯಸ್ಸಿನಲ್ಲಿ ಆಧಾರವಾಗಬಲ್ಲ ಹಲವಾರು ಯೋಜನೆಗಳನ್ನು ಯಕ್ಷಕಲಾರಂಗ ಪ್ರತಿ ವರ್ಷವೂ ಹಮ್ಮಿಕೊಳ್ಳುತ್ತಿದೆ.
ಹಿರಿಯ ಕಲಾವಿದರಿಗೆ ತಲಾ ರೂ 10000/- ದಂತೆ ಹದಿನೆಂಟು ಪ್ರಶಸ್ತಿಗಳನ್ನು ಪ್ರತಿವರ್ಷವೂ ಯಕ್ಷಕಲಾರಂಗ ನೀಡುತ್ತದೆ. ಹಿರಿಯ ಯಕ್ಷಗಾನ ವಿದ್ವಾಂಸರೊಬ್ಬರಿಗೆ ರೂ 20000/- ದ ತಲ್ಲೂರು ಕನಕಾ ಅಣ್ಣಯ್ಯ ಪ್ರಶಸ್ತಿ, ಸಾಧಕ ಸಂಘಟನೆಗೆ ರೂ 25000/- ದ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ, ಸಂಸ್ಥೆಯ ಕಾರ್ಯಕರ್ತರೊಬ್ಬರಿಗೆ ‘ಯಕ್ಷಚೇತನ’ ಪ್ರಶಸ್ತಿಯನ್ನೂ ಸಂಸ್ಥೆ ಪ್ರತಿವರ್ಷ ನೀಡುತ್ತಾ ಬಂದಿದೆ.
ಮೇ ತಿಂಗಳಿನಲ್ಲಿ ತಾಳಮದ್ದಳೆ ಸಪ್ತಾಹ, ಜುಲೈ ತಿಂಗಳಿನಲ್ಲಿ ಸದಸ್ಯರಿಗೆ ಉಚಿತವಾಗಿ ಎರಡು ಯಕ್ಷಗಾನ ಪ್ರದರ್ಶನಗಳನ್ನು ಸಂಸ್ಥೆ ಏರ್ಪಡಿಸುತ್ತದೆ. ಪರಂಪರೆಯ ಯಕ್ಷಗಾನ ಪ್ರದರ್ಶನ, ಸಂಯೋಜನೆ, ವಿಚಾರ ಸಂಕಿರಣ, ಗ್ರಂಥ ಪ್ರಕಟಣೆ, ಸಿ.ಡಿ ಪ್ರಕಟಣೆ, ಚಿಂತನ ಸರಣಿ, ಉಪಾನ್ಯಾಸ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.
ಮೂವತ್ತಕ್ಕೂ ಮಿಕ್ಕಿದ ವೃತ್ತಿ ಮೇಳದ ಸುಮಾರು 1000 ಕಲಾವಿದರಿಗೆ ಗುಂಪು ವಿಮಾ ಯೋಜನೆ, ಅಫಘಾತ ವಿಮೆ, ಆರೋಗ್ಯ ವಿಮೆ, ಒಂದು ಲಕ್ಷ ರೂಪಾಯಿಗಳ ಜೀವನ್ ಆನಂದ್ ಯೋಜನೆ, ಪ್ರತಿಶತ 50% ರಿಯಾಯಿತಿ ದರದ ಬಸ್‍ಪಾಸ್, ಯಕ್ಷನಿಧಿ ಡೈರಿ, ತಾಂಬೂಲಂ ಗ್ರೂಪ್ ಪ್ರಾಯೋಜಿತ ಕಲಾರಂಗದ ಸಂಕ್ಷಿಪ್ತ ಮಾಹಿತಿಯನ್ನೊಳಗೊಂಡ ಕ್ಯಾಲೆಂಡರ್ ಪ್ರಕಟಣೆ, ಯಕ್ಷಗಾನ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ ಮೊದಲಾದುವುಗಳೇ ಕಲಾವಿದರಿಗೆ ಯಕ್ಷಕಲಾರಂಗವು ನೀಡುತ್ತಿರುವ ಕೊಡುಗೆಗಳು. ಅಲ್ಲದೆ ಮೇ ತಿಂಗಳ ಕೊನೆಯ ದಿನ ಪ್ರತಿವರ್ಷ ಉಡುಪಿಯಲ್ಲಿ ಯಕ್ಷಗಾನ ಕಲಾವಿದರ ಸಮಾವೇಷ ನಡೆಸುತ್ತಾ ಬರುತ್ತಿದೆ.
ಕಳೆದ 11 ವರ್ಷಗಳಿಂದ ಉಡುಪಿ ಜಿಲ್ಲೆಯ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ ನಂತರದ ವಿದ್ಯಾಭ್ಯಾಸಕ್ಕೆ ನೆರವು, ಪಠ್ಯಪುಸ್ತಕ, ಲ್ಯಾಪ್‍ಟ್ಯಾಪ್, ವಿದ್ಯುತ್ ಸಂಪರ್ಕವಿಲ್ಲದ ವಿದ್ಯಾರ್ಥಿಗಳ ಮನೆಗಳಿಗೆ ಸೌರ ಬೆಳಕಿನ ವ್ಯವಸ್ಥೆಯನ್ನು ಸಂಸ್ಥೆ ಮಾಡಿದೆ. ಈ ವರೆಗೆ 5976 ವಿದ್ಯಾರ್ಥಿಗಳಿಗೆ ರೂ 2,64,68,000 ಮೊತ್ತದ ನೆರವನ್ನು ನೀಡಿದೆ. 2015 ರಲ್ಲಿ 1057 ವಿದ್ಯಾರ್ಥಿಗಳಿಗೆ ರೂ 64,66,000 ಮೊತ್ತವನ್ನು ವಿತರಿಸಿದ್ದಾರೆ.
ಈ ವರೆಗೆ 4 ಮಂದಿ ವಿದ್ಯಾಪೋಷಕ್ ಫಲಾನುಭವಿಗಳಿಗೆ ದಾನಿಗಳ ನೆರವಿನಿಂದ ಮನೆಗಳನ್ನು ಕಟ್ಟಿಸಿಕೊಡಲಾಗಿದೆ. ಉಡುಪಿ ಶಾಸಕರ ನೇತೃತ್ವದ ಯಕ್ಷಶಿಕ್ಷಣ ಟ್ರಸ್ಟ್ ಮೂಲಕ 42 ಪ್ರೌಢ ಶಾಲೆಗಳಲ್ಲಿ ಯಕ್ಷಗಾನ ಕಲಿಕೆ ಮತ್ತು ಪ್ರದರ್ಶನದ ವ್ಯವಸ್ಥೆಯನ್ನು ಸಂಸ್ಥೆ ನಿರ್ವಹಿಸುತ್ತಿದೆ. ಕಲಾವಿದರ ಶ್ರೇಯಸ್ಸಿಗಾಗಿ ಯಕ್ಷಕಲಾರಂಗ ಉಡುಪಿ ಎಂಬ ನಮ್ಮ ಹೆಮ್ಮೆಯ ಸಂಸ್ಥೆ ಶ್ರಮಿಸುತ್ತಿರುವುದು ನಮಗೆಲ್ಲಾ ಹೆಮ್ಮೆಯ ವಿಚಾರ. ಈ ಎಲ್ಲಾ ಯೋಜನೆಗಳನ್ನು ಸಾಕಾರಗೊಳಿಸಲು ಖಂಡಿತವಾಗಿಯೂ ಸಂಸ್ಥೆಯು ಆರ್ಥಿಕವಾಗಿ ಇನ್ನೂ ಬಲಿಷ್ಠವಾಗಲಿ ಹಾಗೂ ಸಮಾಜಮುಖೀ ಯೋಜನೆಗಳನ್ನು ಹಮ್ಮಿಕೊಂಡಿರುವ ಯಕ್ಷಕಲಾರಂಗ ಎಂಬ ನಮ್ಮೆಲ್ಲರ ಅಭಿಮಾನದ ಸಂಸ್ಥೆಗೆ ಆರ್ಥಿಕ ನೆರವು ನಿರಂತರ ಹರಿದು ಬರುತ್ತಿರಲಿ, ಸಂಸ್ಥೆಯು ಬೆಳಗಿ ಕಲಾವಿದರ ಬಾಳೂ ಬೆಳಗಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಪತ್ರಿಕೆಯು ಶುಭಹಾರೈಸುತ್ತದೆ. ಈ ಸಂಸ್ಥೆಗೆ ನೆರವು ನೀಡುವ ಮಹನೀಯರಿಗೆ ಆದಾಯ ತೆರಿಗೆ ವಿನಾಯಿತಿ ಇದೆ.

ಲೇಖನ: ರವಿಶಂಕರ್ ವಳಕ್ಕುಂಜ

Comments

Popular posts from this blog

ರಂಗನಿಷ್ಠೆ, ಅರ್ಪಣಾಭಾವದ ಯಕ್ಷತಾರೆ ಕಾಸರಗೋಡು ಸುಬ್ರಾಯ ಹೊಳ್ಳ

ಬಡಗಿನ ಅನುಭವೀ ಕಲಾವಿದ, ಸಂಘಟಕ - ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ 

ದಿಗ್ವಿಜಯಕ್ಕೆ ಸಜ್ಜಾಗಿರುವ ಮೇಳಗಳಿಗೆ ಮತ್ತು ಕಲಾವಿದರುಗಳಿಗೆ ಶುಭಾಶಯಗಳು