ಪರಂಪರೆಯ, ಹಿರಿಯ ಯಕ್ಷಗಾನ ಕಲಾವಿದರು ಗೋಡೆ ಶ್ರೀ ನಾರಾಯಣ ಹೆಗಡೆ
ಗೋಡೆ ಶ್ರೀ ನಾರಾಯಣ ಹೆಗಡೆಯವರು ಬಡಗುತಿಟ್ಟು ಯಕ್ಷಗಾನದ ಅತ್ಯಂತ ಹಿರಿಯ ಕಲಾವಿದರು. 1955ನೇ ಇಸವಿ, ತನ್ನ ಹದಿನೈದನೇ ವಯಸ್ಸಿನಲ್ಲಿ ಯಕ್ಷಗಾನ ಕಲಾವಿದನಾಗಿ ರಂಗಪ್ರವೇಶ ಮಾಡಿದ ಗೋಡೆಯವರು ಈ ಕ್ಷೇತ್ರದಲ್ಲಿ ಅರುವತ್ತಮೂರು ವರ್ಷಗಳ ಅನುಭವಿಗಳು. ಕೆರೆಮನೆ ಶಂಭು ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಚಿಟ್ಟಾಣಿ ಮೊದಲಾದವರ ಸಮಕಾಲೀನರಾಗಿ ವ್ಯವಸಾಯವನ್ನು ಮಾಡಿದವರು. ಪ್ರಚಾರಕ್ಕಾಗಿ, ಪ್ರಸಿದ್ಧಿಗಾಗಿ ಬಾಗದೆ, ಪಾತ್ರಕ್ಕೆ ಬೇಕಾದಂತೆ ಬಾಗಿ ಅಭಿನಯಿಸಿದ ಹಿರಿಯ ಶ್ರೇಷ್ಠ ಕಲಾವಿದರು. ಹೊಸತನಗಳ ಆವಿಷ್ಕಾರಗಳಿಂದ ದೂರ ಉಳಿದು, ಪರಂಪರೆಯ ಹಾದಿಯನ್ನೇ ಕ್ರಮಿಸಿ ವಿದ್ವಾಂಸರ ಮೆಚ್ಚುಗೆಗೆ ಪಾತ್ರರಾದ ಕಲಾವಿದರಿವರು. ಇವರು ಕೆರೆಮನೆ ಶಿವರಾಮ ಹೆಗಡೆಯವರ ಜತೆಯಲ್ಲೂ ಪಾತ್ರಗಳನ್ನು ನಿರ್ವಹಿಸಿದ ಹಿರಿಯ ಕಲಾವಿದರು. ಶಂಭುಹೆಗಡೆ ಮತ್ತು ಚಿಟ್ಟಾಣಿಯವರ ಜತೆ, ಸಮಾನವಾಗಿ ಅತ್ಯಧಿಕ ವೇಷಗಳನ್ನು ಮಾಡಿದ ಹಿರಿಮೆ ಇವರಿಗಿದೆ. ಹಳೆಯ ಮತ್ತು ಹೊಸ ಪೀಳಿಗೆಯ ಹೆಚ್ಚಿನ ಕಲಾವಿದರೊಂದಿಗೂ ಪಾತ್ರಗಳನ್ನು ನಿರ್ವಹಿಸಿದ ಒಬ್ಬ ಅನುಭವೀ ಕಲಾವಿದ. ದೀರ್ಘಕಾಲದ ತನ್ನ ಯಕ್ಷಗಾನದ ಬದುಕಿನಲ್ಲಿ ಎಲ್ಲಾ ರೀತಿಯ ಪಾತ್ರಗಳನ್ನೂ ನಿರ್ವಹಿಸಿದ್ದಾರೆ. ಕೌರವ, ಋತುಪರ್ಣ, ಬ್ರಹ್ಮಕಪಾಲ ಪ್ರಸಂಗದ ಬ್ರಹ್ಮ, ಕಾರ್ತವೀರ್ಯಾರ್ಜುನ ಕಾಳಗ ಪ್ರಸಂಗದ ರಾವಣ, ಶ್ರೀರಾಮ ನಿರ್ಯಾಣ ಪ್ರಸಂಗದ ಲಕ್ಷ್ಮಣ ಮೊದಲಾದ ಪಾತ್ರಗಳು ಇವರಿಗೆ ಪ್ರಸಿದ್ಧಿಯನ್ನು ನೀಡಿತ್ತು. ಈ ಪಾತ್ರಗಳನ್ನು ತನ್ನದೇ ಶೈಲಿಯಲ್ಲಿ ಅಭಿನಯಿಸುತ್ತಾ ಅವುಗಳಿಗೊಂದು ನೂತನ ಚಿತ್ರಣವನ್ನೇ ಒದಗಿಸಿದ್ದರು. ಪರಂಪರೆಯನ್ನು ಇಷ್ಟಪಡುವ ಉದಯೋನ್ಮುಖ ಕಲಾವಿದರಿಗೆ ಗೋಡೆಯವರು ಆದರ್ಶರು. ಅವರ ಪಾತ್ರಗಳನ್ನು ನೋಡಿದ ಹೊಸ ಕಲಾವಿದರು ‘ಗೋಡೆ ಶೈಲಿ’ಯನ್ನು ಅನುಸರಿಸಿದ್ದೂ ಇದೆ. ಬ್ರಹ್ಮಕಪಾಲ ಪ್ರಸಂಗದ ಬ್ರಹ್ಮನಾಗಿ ಗೋಡೆಯವರದ್ದು ಅಮೋಘ ಅಭಿನಯ. ತೆಂಕಣ ಯಕ್ಷಗಾನ ಕಲಾವಿದರಾದ ಶೇಣಿ, ಕೆ. ಗೋವಿಂದ ಭಟ್, ಕುಂಬಳೆ ಸುಂದರ ರಾವ್ ಮೊದಲಾದವರ ಜತೆಯೂ ವೇಷ ಮಾಡಿದ್ದಿದೆ. 1984ನೇ ಇಸವಿ ಶೇಣಿ ಗೋಪಾಲಕೃಷ್ಣ ಭಟ್ಟರ ಭೀಷ್ಮನಿಗೆ ಅರ್ಜುನನಾಗಿ ಅಭಿನಯಿಸಿದ್ದರು. ಸುಮಾರು ಇಪ್ಪತ್ತು ವರ್ಷಗಳಿಗೂ ಮೊದಲು ಎಂದು ನನ್ನ ನೆನಪು. ಸಂಪಾಜೆ ಯಕ್ಷೋತ್ಸವದಲ್ಲಿ ಬಡಗುತಿಟ್ಟಿನ ಪ್ರದರ್ಶನ ಸುಧನ್ವ ಮೋಕ್ಷ ಪ್ರಸಂಗ. ಗೋಡೆಯವರು ಅರ್ಜುನ. ಸುಧನ್ವ ಯಾರೆಂದು ನೆನಪಾಗುತ್ತಿಲ್ಲ. ಸುಧನ್ವನಿಂದ ಸೋತು ಅರ್ಜುನನು ದುಃಖಿಸುತ್ತಿದ್ದಾಗ ಕುಂಬಳೆ ಸುಂದರ ರಾಯರು ಶ್ರೀಕೃಷ್ಣನಾಗಿ ರಂಗಪ್ರವೇಶ ಮಾಡಿದ್ದರು. ತೆಂಕಿನ ವೇಷ. ಪದ್ಯಾಣ ಗಣಪತಿ ಭಟ್ಟರು ಭಾಗವತರಾಗಿ ಒದಗಿದ್ದರು. ಅರ್ಜುನನು ತಾನು ಮಾಡಿದ ಪ್ರತಿಜ್ಞೆಯಂತೆ, ಮೂರರಲ್ಲಿ ಮೊದಲ ಬಾಣವನ್ನು ಹೂಡಲು ಸಿದ್ಧನಾದಾಗ ಶ್ರೀಕೃಷ್ಣನು ತಡೆಯುತ್ತಾನೆ. ಸುಧನ್ವನನ್ನು ಉರುಳಿಸಲು ಈ ಬಾಣವು ಪರ್ಯಾಪ್ತವಾಗದು. ಅದಕ್ಕಾಗಿ ಈ ಬಾಣಕ್ಕೆ ಶಕ್ತಿಯನ್ನು ತುಂಬಬೇಕಾಗಿದೆ ಎಂದು ಶ್ರೀಕೃಷ್ಣನಾಗಿ ಸುಂದರ ರಾಯರು ಹೇಳುತ್ತಾರೆ. ಆಗ ಅರ್ಜುನನ ಪಾತ್ರಧಾರಿ, ಗೋಡೆ ನಾರಾಯಣ ಹೆಗಡೆಯವರು ‘‘ಸುಧನ್ವನನ್ನು ಸೋಲಿಸಲು ನಾನು ಹೂಡುವ ಬಾಣಕ್ಕೆ ನೀನು ಶಕ್ತಿ ತುಂಬಲೇಬೇಕೆ? ಹಾಗಾದರೆ ನಾನು ಬರೀ ‘ಗೋಡೆ’ ಎಂದಾಯಿತಲ್ಲಾ!’’ ಎಂದು ಹೇಳಿದ್ದರು. ಆಗ ಸುಂದರ ರಾಯರು- ‘‘ಹೌದು. ನೀನು ಗೋಡೆ. ನಾನು ಚಿತ್ರ ಬರೆದರೆ ಮಾತ್ರ ಆ ಗೋಡೆ ಸುಂದರವಾಗುತ್ತದೆ’’ ಎಂದು ಹೇಳಿದ್ದರು. ಪ್ರಸಂಗದ ಕೊನೆವರೆಗೂ, ಇಬ್ಬರಿಂದಲೂ ಇಂತಹ ರಂಜನೀಯ ಸಂಭಾಷಣೆಗಳು ನಡೆದಿದ್ದುವು. ನಾನು ಇದಕ್ಕೆ ಪ್ರತ್ಯಕ್ಷದರ್ಶಿ. ಇದರ ವೀಡಿಯೋ ತುಣುಕು ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಎಂಬ ಘನಸಂಸ್ಥೆಯಲ್ಲಿ ಬಹುಷಃ ದಾಖಲೆಯಾಗಿ ಉಳಿದಿರಬಹುದೆಂದು ನನ್ನ ಭಾವನೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಕೊರ್ಲಕೈ ಎಂಬ ಹಳ್ಳಿ ಗೋಡೆ ನಾರಾಯಣ ಹೆಗಡೆಯವರ ಹುಟ್ಟೂರು. 1940 ಫೆಬ್ರವರಿ ಹದಿನೈದನೇ ತಾರೀಕಿನಂದು ಶ್ರೀ ತಿಮ್ಮಯ್ಯ ಹೆಗಡೆ ಮತ್ತು ಶ್ರೀಮತಿ ಗೌರಮ್ಮ ದಂಪತಿಗಳ ಪುತ್ರನಾಗಿ ಜನನ. ಇವರ ಹಿರಿಯರು ನಿರ್ಮಿಸಿದ ಹಳೇಕಾಲದ ಮನೆ. ಉದ್ದಗಲವನ್ನು ಹೊಂದಿ, ಬಹಳ ಗಟ್ಟಿಯಾದ ಗೋಡೆಯನ್ನು ಹೊಂದಿದ ಮನೆ ಅದು. ಅಂತಹ ಗೋಡೆಯನ್ನು ಹೊಂದಿದ ಮನೆಯು ಆ ಕಾಲದಲ್ಲಿ ಬೇರೆ ಇರಲಿಲ್ಲ. ಆದಕಾರಣ ಬಹಳ ಹಿಂದೆಯೇ ಗೋಡೆ ಮನೆ ಎಂದೇ ಎಲ್ಲರೂ ಕರೆಯುತ್ತಿದ್ದರಂತೆ. ಹಿರಿಯರು ಮಾಡಿಟ್ಟ ಜಮೀನು ಇರಲಿಲ್ಲ. ಕಡುಬಡತನ. ಬದುಕಿಗಾಗಿ ಹಿರಿಯರು ಹಲವಾರು ಕಡೆ ಬೇರೆ ಬೇರೆ ಕೆಲಸಗಳನ್ನು ಮಾಡುತ್ತಿದ್ದರು. ಹಾಗಾಗಿ ಗೋಡೆಯವರು ಕೆಲವು ಶಾಲೆಗಳಲ್ಲಿ 4ನೇ ತರಗತಿ ವರೆಗೆ ಮಾತ್ರ ಓದಿದ್ದರು. ಮುತ್ತಜ್ಜನಾದ ಮರಿಯಪ್ಪ ಹೆಗಡೆಯವರು ಕಲಾವಿದರಾಗಿದ್ದರು. ತಂದೆಯೂ ವೇಷ ಮಾಡಿ ಅನುಭವ ಉಳ್ಳವರು. ಸೋದರಮಾವ ನಾರಾಯಣ ಹೆಗಡೆಯವರೂ ಯಕ್ಷಗಾನ ಕಲಾವಿದರಾಗಿದ್ದರು. ಹಾಗಾಗಿ ಯಕ್ಷಗಾನವು ರಕ್ತಗತವಾಗಿ ಬಂದಿತ್ತು. ಶಾಲೆ ಬೇಡ ಅನಿಸಿ ಯಕ್ಷಗಾನ ಕಲಿಯಲು ಮನಮಾಡಿದ್ದರು. ಇವರ ಅಜ್ಜನ ಮನೆ ಶಿರಳಗಿಯಲ್ಲಿ. ಸಮೀಪದ ಊರು ಕೊಳಗಿ. ಕೊಳಗಿ ಸೀತಾರಾಮ ಭಾಗವತರು ಯಕ್ಷಗಾನದ ಎಲ್ಲಾ ವಿಭಾಗಗಳಲ್ಲೂ ಪರಿಣತರಾಗಿ ನಾಟ್ಯ ಹೇಳಿಕೊಡುತ್ತಿದ್ದರು. ಕುಣಿತ ಹೇಳಿಕೊಡುವುದನ್ನು ನೋಡಲೆಂದು ಗೋಡೆಯವರು ಅಲ್ಲಿಗೆ ಹೋಗಿದ್ದರು. ಅದನ್ನು ಗಮನಿಸಿದ ಸೀತಾರಾಮ ಭಾಗವತರು ಗೋಡೆಯವರನ್ನು ಕರೆದು, ನಿನ್ನ ದೇಹವು ಯಕ್ಷಗಾನಕ್ಕೆ ಬೇಕಾದಂತೆ ಇದೆ. ಕಲಿಯುವುದಿದ್ದರೆ ಹೇಳಿಕೊಡುತ್ತೇನೆ ಎಂದಿದ್ದರು. ಅವರಿಂದಲೇ ಆರು ತಿಂಗಳ ಕಾಲ ನಾಟ್ಯಾಭ್ಯಾಸ. 1955ರಲ್ಲಿ ಹಣಜೀಬೈಲು ಸೀತಾರಾಮ ಯಕ್ಷಗಾನ ಮಂಡಳಿಯ ಆಟ. ಪ್ರಸಂಗ ವಾಲಿಮೋಕ್ಷ. ಶಿರಳಗಿಯಲ್ಲಿ ನಡೆದ ಈ ಆಟದಲ್ಲಿ ತಾರೆಯಾಗಿ ರಂಗಪ್ರವೇಶ. ವ್ಯವಸ್ಥಾಪಕ ರಾದ ಅಣ್ಣಪ್ಪ ಹೆಗಡೆಯವರು ತಂಡದ ಖಾಯಂ ಕಲಾವಿದನಾಗಲು ಅವಕಾಶವಿತ್ತು ಪ್ರೋತ್ಸಾಹಿಸಿದ್ದರು. ಹಾರ್ಸಿಕಟ್ಟಾ ಎಂಬಲ್ಲಿ ಹದಿನೈದು ದಿನಗಳಿಗೊಮ್ಮೆ ತಾಳಮದ್ದಳೆಯೂ ನಡೆಯುತ್ತಿತ್ತು. ಸುಧನ್ವಮೋಕ್ಷ ಪ್ರಸಂಗದಲ್ಲಿ ಪ್ರಭಾವತಿಯಾಗಿ ಮೊತ್ತಮೊದಲು ತಾಳಮದ್ದಳೆಯಲ್ಲಿ ಅರ್ಥ ಹೇಳಿದ್ದರು. ಕೊಳಗಿ ಅನಂತ ಹೆಗಡೆಯವರಿಂದ ಪ್ರೋತ್ಸಾಹವೂ ಸಿಕ್ಕಿತ್ತು. ನಿರಂತರವಾಗಿ ಆಟ-ಕೂಟಗಳಲ್ಲಿ ಭಾಗವಹಿಸಲು ಆರಂಭಿಸಿದರು. ಆ ಕಾಲಕ್ಕೆ ಸ್ತ್ರೀಪಾತ್ರಧಾರಿಗಳ ಕೊರತೆಯಿದ್ದುದರಿಂದ ಗೋಡೆಯವರು ಸ್ತ್ರೀಪಾತ್ರಗಳನ್ನೇ ಆಯ್ಕೆ ಮಾಡಿಕೊಂಡಿದ್ದರು. ಕರಾವಳೀ ಪ್ರದೇಶಕ್ಕೂ ಹೋಗಿ ವೇಷ ಮಾಡಲಾರಂಭಿಸಿದ್ದರು. ಹದಿನೈದು ಕಲಾವಿದರಿದ್ದ ಕೊಳಗಿಯ ಹೊಸತಂಡ ಮೂರು ಗಂಟೆಯ ಪ್ರದರ್ಶನಗಳನ್ನು ನೀಡುತ್ತಿತ್ತು. ವರ್ಷಕ್ಕೆ ನಲುವತ್ತು ಪ್ರದರ್ಶನಗಳು ನಡೆದರೂ ಸರಿಯಾಗಿ ವೀಳ್ಯ ಸಿಗುತ್ತಿರಲಿಲ್ಲ. ಕೊಟ್ಟ ಸಂಭಾವನೆಯನ್ನು ತೆಗೆದುಕೊಳ್ಳಬೇಕಾಗಿತ್ತು. ಒಂದು ಕಡೆ ಹದಿನೈದು ರೂಪಾಯಿ ವೀಳ್ಯ ಸಿಕ್ಕಿದಾಗ ಉತ್ಸಾಹಿತರಾಗಿ ದೊಡ್ಡ ಮೇಳ ಕಟ್ಟುವ ನಿರ್ಧಾರವನ್ನೂ ಮಾಡಿದ್ದರು. ಗೋಡೆಯವರು ಸ್ತ್ರೀಪಾತ್ರಧಾರಿಯಾಗಿ ಆಗ ಮಿಂಚತೊಡಗಿದ್ದರು.
ಕೆರೆಮನೆ ಶಿವರಾಮ ಹೆಗಡೆಯವರ ನೇತೃತ್ವದ ಮೇಳವು ಪ್ರದರ್ಶನ ನೀಡುವುದಕ್ಕಾಗಿ ಸಿದ್ಧಾಪುರಕ್ಕೆ ಬಂದಿತ್ತು. ಪ್ರಸಂಗ ಮೀನಾಕ್ಷಿ ಕಲ್ಯಾಣ. ಗೋಡೆಯವರಿಗೆ ವೇಷ ಮಾಡಲು ಅವಕಾಶವಿತ್ತಿದ್ದರು. ಇವರ ಪಾತ್ರನಿರ್ವಹಣೆಯನ್ನು ನೋಡಿ ಮೆಚ್ಚಿದ ಶಿವರಾಮ ಹೆಗಡೆಯವರು ಮೇಳಕ್ಕೆ ಸೇರಲು ಆಹ್ವಾನ ನೀಡಿದ್ದರು. ಮರುದಿನ ಶಿರಸಿಯಲ್ಲಿ ಸದ್ರಿ ಮೇಳದ ಪ್ರದರ್ಶನ. ಪ್ರಸಂಗ ಕೀಚಕ ವಧೆ. ಸೈರಂಧ್ರಿಯಾಗಿ ಗೋಡೆಯವರ ಅಭಿನಯವನ್ನು ಶಿವರಾಮ ಹೆಗಡೆಯವರು ಮೆಚ್ಚಿ, ಚೆನ್ನಾಗಿ ಆಯ್ತು ಎಂದಿದ್ದರಂತೆ. ಊರಲ್ಲಿಯೂ ಆಟಗಳನ್ನು ನಡೆಸಿ ಗೋಡೆಯವರು ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸಿಯೂ ಆಗಿತ್ತು. ಶಂಭು ಹೆಗಡೆಯವರು ಮೇಳವನ್ನು ನಡೆಸಲು ನಿರ್ಧರಿಸಿದಾಗ ಕೆರೆಮನೆ ಗಜಾನನ ಹೆಗಡೆಯವರು ಗೋಡೆಯವರನ್ನು ಸಂಪರ್ಕಿಸಿದ್ದರು. ಮೇಳಕ್ಕೆ ಬರಲು ಹೇಳಿದಾಗ ನಿರಾಕರಿಸಿದ್ದರೂ, ಕೊನೆಗೆ ಒಪ್ಪಿದ್ದರು. ಹೀಗೆ 1973ರಲ್ಲಿ ಟೆಂಟಿನ ಮೇಳದ ಕಲಾಬದುಕು ಆರಂಭವಾಗಿತ್ತು. ಆ ಹೊತ್ತಿಗೆ ಗೋಡೆಯವರು ಪುರುಷ ಪಾತ್ರಗಳನ್ನು ಮಾಡಲು ಆರಂಭಿಸಿಯಾಗಿತ್ತು. ಚಂದ್ರಹಾಸ, ಶ್ರೀಕೃಷ್ಣ ಮೊದಲಾದ ಪಾತ್ರಗಳನ್ನು ಮಾಡಿದ್ದರು. ಎರಡು ವರ್ಷ ಶಂಭು ಹೆಗಡೆಯವರ ಜತೆ ತಿರುಗಾಟ. ನೆಬ್ಬೂರು ಭಾಗವತರು, ಕೆರೆಮನೆಯ ಶಿವರಾಮ ಹೆಗಡೆ, ಮಹಾಬಲ ಹೆಗಡೆ, ಶಂಭು ಹೆಗಡೆ, ಗಜಾನನ ಹೆಗಡೆಯವರ ಒಡನಾಟವು ಸಿಕ್ಕಿತ್ತು. 1975ರಲ್ಲಿ ಅಮೃತೇಶ್ವರೀ ಮೇಳಕ್ಕೆ ಉಪ್ಪೂರರ ಭಾಗವತಿಕೆ. 1979ರಲ್ಲಿ ಶಂಭು ಹೆಗಡೆಯವರ ಕೋರಿಕೆಯಂತೆ ಇಡಗುಂಜಿ ಮೇಳಕ್ಕೆ. ಆಗ ಶಿವರಾಮ ಹೆಗಡೆಯವರು ನಿವೃತ್ತರಾಗಿದ್ದರು. ಆರು ವರ್ಷಗಳ ವ್ಯವಸಾಯ ಇಡಗುಂಜಿ ಮೇಳದಲ್ಲಿ. ಬಳಿಕ ಒಂದು ವರ್ಷ ಪೆರ್ಡೂರು ಮೇಳದಲ್ಲಿ. ಮತ್ತೆ ಒಂದು ವರ್ಷ ಮುಲ್ಕಿ ಮೇಳದಲ್ಲಿ (ಬಡಗು ಮೇಳ). ಬಳಿಕ ಮೂರು ವರ್ಷ ಪುರ್ಲೆ ಶ್ರೀ ರಾಮಚಂದ್ರ ಹೆಗಡೆಯವರ ಶಿರಸಿ ಪಂಚಲಿಂಗೇಶ್ವರ ಮೇಳದಲ್ಲಿ ವ್ಯವಸಾಯ. ಮತ್ತೆ ನಾಲ್ಕು ವರ್ಷ ಶಿರಿಯಾರ ಮುದ್ದಣ್ಣ ಶೆಟ್ರ ನೇತೃತ್ವದ ಶಿರಸಿ ಮಾರಿಕಾಂಬಾ ತಂಡದಲ್ಲಿ ಕಲಾಸೇವೆ. ಶಂಭು ಹೆಗಡೆ ಮತ್ತು ಚಿಟ್ಟಾಣಿಯವರ ಜತೆ ಗೋಡೆ ಅವರ ವೇಷಗಳನ್ನು ಪ್ರೇಕ್ಷಕರು ಬಹುವಾಗಿ ಮೆಚ್ಚಿಕೊಂಡಿದ್ದರು. ಶಂಭು ಹೆಗಡೆಯವರ ಕಾರ್ತವೀರ್ಯನಿಗೆ ರಾವಣ, ನಿರ್ಯಾಣದ ರಾಮನಿಗೆ ಲಕ್ಷ್ಮಣನಾಗಿ, ಶಲ್ಯ ಸೇನಾಧಿಪತ್ಯದ ಕರ್ಣನಿಗೆ ಶಲ್ಯನಾಗಿ, ಭಸ್ಮಾಸುರನಿಗೆ ಈಶ್ವರನಾಗಿ ಅಭಿನಯ. ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಜತೆ ಗದಾಯುದ್ಧದ ಕೌರವನಿಗೆ ಭೀಮನಾಗಿ, ಕೃಷ್ಣಾರ್ಜುನ ಕಾಳಗದ ಅರ್ಜುನನಿಗೆ ಶ್ರೀಕೃಷ್ಣನಾಗಿ ಅಭಿನಯಿಸಿದ್ದರು. ಈ ಸಂದರ್ಭದಲ್ಲಿ ಈ ಮೂವರು ಶ್ರೇಷ್ಠ ಕಲಾವಿದರು ಪಾತ್ರಗಳನ್ನು ಅದಲುಬದಲು ಮಾಡಿಕೊಂಡೂ ಅಭಿನಯಿಸಿದ್ದಾರೆ. ಕೆರೆಮನೆ, ಗೋಡೆ, ಚಿಟ್ಟಾಣಿಯವರು ಮಹಾನ್ ಪ್ರತಿಭೆಗಳು ಅನ್ನೋದಕ್ಕೆ ಇದುವೇ ಸಾಕ್ಷಿ. ಕಲಾರತ್ನತ್ವಯರು ಎನ್ನಬಹುದು. ಕಳೆದ ವರ್ಷದಿಂದ ಯಕ್ಷಗಾನ ಕ್ಷೇತ್ರದಿಂದ ದೂರವಾಗಿ ವಿಶ್ರಾಂತ ಬದುಕನ್ನು ನಡೆಸುತ್ತಿದ್ದಾರೆ. ಭಾರತದ ನಾನಾ ಕಡೆ ಅಲ್ಲದೆ ಬಹ್ರೈನ್ನಲ್ಲೂ ನಡೆದ ಪ್ರದರ್ಶಗಳಲ್ಲಿ ಭಾಗವಹಿಸಿರುತ್ತಾರೆ. ಅಮೇರಿಕಾ ಪ್ರವಾಸಕ್ಕೆ ಬೇಡಿಕೆಯಿದ್ದರೂ ವೀಸಾ ಸಮಸ್ಯೆಯಿಂದಾಗಿ ಅವಕಾಶವಾಗಿರಲಿಲ್ಲ. ಸುಮಾರು ಇಪ್ಪತ್ತೈದು ಪ್ರಶಸ್ತಿಗಳನ್ನು ಪಡೆದ ಗೋಡೆ ನಾರಾಯಣ ಹೆಗಡೆಯವರು ಮುನ್ನೂರಕ್ಕೂ ಮಿಕ್ಕಿದ ಸನ್ಮಾನಗಳನ್ನೂ ಸ್ವೀಕರಿಸಿರುತ್ತಾರೆ. 2012ರಲ್ಲಿ ರಾಜ್ಯ ಪ್ರಶಸ್ತಿಯೂ ಒಲಿದು ಬಂದಿದೆ. ಕಲಾಬದುಕಿನ ಸಂದರ್ಭ ಸುಮಾರು ಐವತ್ತು ಮಂದಿಗೆ ತರಬೇತಿಯನ್ನೂ ನೀಡಿದ್ದಾರೆ. ಡಿ.ಜಿ. ಹೆಗಡೆ, ಶಿರಳಗಿ ಭಾಸ್ಕರ ಜೋಷಿ, ಶಿರಳಗಿ ತಿಮ್ಮಪ್ಪ ಹೆಗಡೆ ಇವರಲ್ಲಿ ಪ್ರಮುಖರು. 1975ರಲ್ಲಿ ಲಕ್ಷ್ಮೀ ಅವರ ಜತೆ ವಿವಾಹ. ಗೋಡೆ ಶ್ರೀ ನಾರಾಯಣ ಹೆಗಡೆ ಮತ್ತು ಶ್ರೀಮತಿ ಲಕ್ಷ್ಮೀದಂಪತಿಗಳಿಗೆ ಐದು ಮಂದಿ ಮಕ್ಕಳು (3 ಹೆಣ್ಣು ಮತ್ತು 2 ಗಂಡು). ಹಿರಿಯ ಪುತ್ರಿ ವತ್ಸಲಾ ವಿವಾಹಿತೆ. ಹಿರಿಯ ಪುತ್ರ ಪ್ರಶಾಂತ್ ಹೆಗಡೆ ಕೃಷಿಕರು. ದ್ವಿತೀಯ ಪುತ್ರ ಪ್ರಸಾದ್ ಹೆಗಡೆ ಗೋಳಿಗರಡಿ ಮೇಳದ ಭಾಗವತರು. ಸಾಸ್ತಾನದಲ್ಲಿ ವಾಸ್ತವ್ಯ). ದ್ವಿತೀಯ ಪುತ್ರಿ ಭವ್ಯಾ ಹೆಗಡೆ ವಿವಾಹಿತೆ. ತೃತೀಯ ಪುತ್ರಿ ದಿವ್ಯಾ ಹೆಗಡೆ ವಿವಾಹಿತೆ. ಬಡಗುತಿಟ್ಟಿನ ಅತ್ಯಂತ ಹಿರಿಯ, ಅತ್ಯುತ್ತಮ ಕಲಾವಿದರಾದ ಗೋಡೆ ಶ್ರೀ ನಾರಾಯಣ ಹೆಗಡೆಯವರು ಪ್ರಸ್ತುತ ಶಿರಸಿ ಸಮೀಪದ ಬೂದಿಮರಡು ಎಂಬಲ್ಲಿ ಕೃಷಿಯೊಂದಿಗೆ ವಿಶ್ರಾಂತ ಜೀವನವನ್ನು ನಡೆಸುತ್ತಿದ್ದಾರೆ. ಮುಂದಿನ ಬದುಕು ಸುಖ, ನೆಮ್ಮದಿ, ಸಂತೋಷಗಳೆಂಬ ಪಾಕಗಳಿಂದ ಕೂಡಿ ಸುಂದರವಾಗಿರಲಿ ಎಂಬ ಹಾರಯಿಕೆಗಳು. ು
- ರವಿಶಂಕರ್ ವಳಕ್ಕುಂಜ
ಗೋಡೆ ನಾರಾಯಣ ಹೆಗಡೆ
ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಕೊರ್ಲಕೈ ಎಂಬ ಹಳ್ಳಿ ಗೋಡೆ ನಾರಾಯಣ ಹೆಗಡೆಯವರ ಹುಟ್ಟೂರು. 1940 ಫೆಬ್ರವರಿ ಹದಿನೈದನೇ ತಾರೀಕಿನಂದು ಶ್ರೀ ತಿಮ್ಮಯ್ಯ ಹೆಗಡೆ ಮತ್ತು ಶ್ರೀಮತಿ ಗೌರಮ್ಮ ದಂಪತಿಗಳ ಪುತ್ರನಾಗಿ ಜನನ. ಇವರ ಹಿರಿಯರು ನಿರ್ಮಿಸಿದ ಹಳೇಕಾಲದ ಮನೆ. ಉದ್ದಗಲವನ್ನು ಹೊಂದಿ, ಬಹಳ ಗಟ್ಟಿಯಾದ ಗೋಡೆಯನ್ನು ಹೊಂದಿದ ಮನೆ ಅದು. ಅಂತಹ ಗೋಡೆಯನ್ನು ಹೊಂದಿದ ಮನೆಯು ಆ ಕಾಲದಲ್ಲಿ ಬೇರೆ ಇರಲಿಲ್ಲ. ಆದಕಾರಣ ಬಹಳ ಹಿಂದೆಯೇ ಗೋಡೆ ಮನೆ ಎಂದೇ ಎಲ್ಲರೂ ಕರೆಯುತ್ತಿದ್ದರಂತೆ. ಹಿರಿಯರು ಮಾಡಿಟ್ಟ ಜಮೀನು ಇರಲಿಲ್ಲ. ಕಡುಬಡತನ. ಬದುಕಿಗಾಗಿ ಹಿರಿಯರು ಹಲವಾರು ಕಡೆ ಬೇರೆ ಬೇರೆ ಕೆಲಸಗಳನ್ನು ಮಾಡುತ್ತಿದ್ದರು. ಹಾಗಾಗಿ ಗೋಡೆಯವರು ಕೆಲವು ಶಾಲೆಗಳಲ್ಲಿ 4ನೇ ತರಗತಿ ವರೆಗೆ ಮಾತ್ರ ಓದಿದ್ದರು. ಮುತ್ತಜ್ಜನಾದ ಮರಿಯಪ್ಪ ಹೆಗಡೆಯವರು ಕಲಾವಿದರಾಗಿದ್ದರು. ತಂದೆಯೂ ವೇಷ ಮಾಡಿ ಅನುಭವ ಉಳ್ಳವರು. ಸೋದರಮಾವ ನಾರಾಯಣ ಹೆಗಡೆಯವರೂ ಯಕ್ಷಗಾನ ಕಲಾವಿದರಾಗಿದ್ದರು. ಹಾಗಾಗಿ ಯಕ್ಷಗಾನವು ರಕ್ತಗತವಾಗಿ ಬಂದಿತ್ತು. ಶಾಲೆ ಬೇಡ ಅನಿಸಿ ಯಕ್ಷಗಾನ ಕಲಿಯಲು ಮನಮಾಡಿದ್ದರು. ಇವರ ಅಜ್ಜನ ಮನೆ ಶಿರಳಗಿಯಲ್ಲಿ. ಸಮೀಪದ ಊರು ಕೊಳಗಿ. ಕೊಳಗಿ ಸೀತಾರಾಮ ಭಾಗವತರು ಯಕ್ಷಗಾನದ ಎಲ್ಲಾ ವಿಭಾಗಗಳಲ್ಲೂ ಪರಿಣತರಾಗಿ ನಾಟ್ಯ ಹೇಳಿಕೊಡುತ್ತಿದ್ದರು. ಕುಣಿತ ಹೇಳಿಕೊಡುವುದನ್ನು ನೋಡಲೆಂದು ಗೋಡೆಯವರು ಅಲ್ಲಿಗೆ ಹೋಗಿದ್ದರು. ಅದನ್ನು ಗಮನಿಸಿದ ಸೀತಾರಾಮ ಭಾಗವತರು ಗೋಡೆಯವರನ್ನು ಕರೆದು, ನಿನ್ನ ದೇಹವು ಯಕ್ಷಗಾನಕ್ಕೆ ಬೇಕಾದಂತೆ ಇದೆ. ಕಲಿಯುವುದಿದ್ದರೆ ಹೇಳಿಕೊಡುತ್ತೇನೆ ಎಂದಿದ್ದರು. ಅವರಿಂದಲೇ ಆರು ತಿಂಗಳ ಕಾಲ ನಾಟ್ಯಾಭ್ಯಾಸ. 1955ರಲ್ಲಿ ಹಣಜೀಬೈಲು ಸೀತಾರಾಮ ಯಕ್ಷಗಾನ ಮಂಡಳಿಯ ಆಟ. ಪ್ರಸಂಗ ವಾಲಿಮೋಕ್ಷ. ಶಿರಳಗಿಯಲ್ಲಿ ನಡೆದ ಈ ಆಟದಲ್ಲಿ ತಾರೆಯಾಗಿ ರಂಗಪ್ರವೇಶ. ವ್ಯವಸ್ಥಾಪಕ ರಾದ ಅಣ್ಣಪ್ಪ ಹೆಗಡೆಯವರು ತಂಡದ ಖಾಯಂ ಕಲಾವಿದನಾಗಲು ಅವಕಾಶವಿತ್ತು ಪ್ರೋತ್ಸಾಹಿಸಿದ್ದರು. ಹಾರ್ಸಿಕಟ್ಟಾ ಎಂಬಲ್ಲಿ ಹದಿನೈದು ದಿನಗಳಿಗೊಮ್ಮೆ ತಾಳಮದ್ದಳೆಯೂ ನಡೆಯುತ್ತಿತ್ತು. ಸುಧನ್ವಮೋಕ್ಷ ಪ್ರಸಂಗದಲ್ಲಿ ಪ್ರಭಾವತಿಯಾಗಿ ಮೊತ್ತಮೊದಲು ತಾಳಮದ್ದಳೆಯಲ್ಲಿ ಅರ್ಥ ಹೇಳಿದ್ದರು. ಕೊಳಗಿ ಅನಂತ ಹೆಗಡೆಯವರಿಂದ ಪ್ರೋತ್ಸಾಹವೂ ಸಿಕ್ಕಿತ್ತು. ನಿರಂತರವಾಗಿ ಆಟ-ಕೂಟಗಳಲ್ಲಿ ಭಾಗವಹಿಸಲು ಆರಂಭಿಸಿದರು. ಆ ಕಾಲಕ್ಕೆ ಸ್ತ್ರೀಪಾತ್ರಧಾರಿಗಳ ಕೊರತೆಯಿದ್ದುದರಿಂದ ಗೋಡೆಯವರು ಸ್ತ್ರೀಪಾತ್ರಗಳನ್ನೇ ಆಯ್ಕೆ ಮಾಡಿಕೊಂಡಿದ್ದರು. ಕರಾವಳೀ ಪ್ರದೇಶಕ್ಕೂ ಹೋಗಿ ವೇಷ ಮಾಡಲಾರಂಭಿಸಿದ್ದರು. ಹದಿನೈದು ಕಲಾವಿದರಿದ್ದ ಕೊಳಗಿಯ ಹೊಸತಂಡ ಮೂರು ಗಂಟೆಯ ಪ್ರದರ್ಶನಗಳನ್ನು ನೀಡುತ್ತಿತ್ತು. ವರ್ಷಕ್ಕೆ ನಲುವತ್ತು ಪ್ರದರ್ಶನಗಳು ನಡೆದರೂ ಸರಿಯಾಗಿ ವೀಳ್ಯ ಸಿಗುತ್ತಿರಲಿಲ್ಲ. ಕೊಟ್ಟ ಸಂಭಾವನೆಯನ್ನು ತೆಗೆದುಕೊಳ್ಳಬೇಕಾಗಿತ್ತು. ಒಂದು ಕಡೆ ಹದಿನೈದು ರೂಪಾಯಿ ವೀಳ್ಯ ಸಿಕ್ಕಿದಾಗ ಉತ್ಸಾಹಿತರಾಗಿ ದೊಡ್ಡ ಮೇಳ ಕಟ್ಟುವ ನಿರ್ಧಾರವನ್ನೂ ಮಾಡಿದ್ದರು. ಗೋಡೆಯವರು ಸ್ತ್ರೀಪಾತ್ರಧಾರಿಯಾಗಿ ಆಗ ಮಿಂಚತೊಡಗಿದ್ದರು.
ಕೆರೆಮನೆ ಶಿವರಾಮ ಹೆಗಡೆಯವರ ನೇತೃತ್ವದ ಮೇಳವು ಪ್ರದರ್ಶನ ನೀಡುವುದಕ್ಕಾಗಿ ಸಿದ್ಧಾಪುರಕ್ಕೆ ಬಂದಿತ್ತು. ಪ್ರಸಂಗ ಮೀನಾಕ್ಷಿ ಕಲ್ಯಾಣ. ಗೋಡೆಯವರಿಗೆ ವೇಷ ಮಾಡಲು ಅವಕಾಶವಿತ್ತಿದ್ದರು. ಇವರ ಪಾತ್ರನಿರ್ವಹಣೆಯನ್ನು ನೋಡಿ ಮೆಚ್ಚಿದ ಶಿವರಾಮ ಹೆಗಡೆಯವರು ಮೇಳಕ್ಕೆ ಸೇರಲು ಆಹ್ವಾನ ನೀಡಿದ್ದರು. ಮರುದಿನ ಶಿರಸಿಯಲ್ಲಿ ಸದ್ರಿ ಮೇಳದ ಪ್ರದರ್ಶನ. ಪ್ರಸಂಗ ಕೀಚಕ ವಧೆ. ಸೈರಂಧ್ರಿಯಾಗಿ ಗೋಡೆಯವರ ಅಭಿನಯವನ್ನು ಶಿವರಾಮ ಹೆಗಡೆಯವರು ಮೆಚ್ಚಿ, ಚೆನ್ನಾಗಿ ಆಯ್ತು ಎಂದಿದ್ದರಂತೆ. ಊರಲ್ಲಿಯೂ ಆಟಗಳನ್ನು ನಡೆಸಿ ಗೋಡೆಯವರು ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸಿಯೂ ಆಗಿತ್ತು. ಶಂಭು ಹೆಗಡೆಯವರು ಮೇಳವನ್ನು ನಡೆಸಲು ನಿರ್ಧರಿಸಿದಾಗ ಕೆರೆಮನೆ ಗಜಾನನ ಹೆಗಡೆಯವರು ಗೋಡೆಯವರನ್ನು ಸಂಪರ್ಕಿಸಿದ್ದರು. ಮೇಳಕ್ಕೆ ಬರಲು ಹೇಳಿದಾಗ ನಿರಾಕರಿಸಿದ್ದರೂ, ಕೊನೆಗೆ ಒಪ್ಪಿದ್ದರು. ಹೀಗೆ 1973ರಲ್ಲಿ ಟೆಂಟಿನ ಮೇಳದ ಕಲಾಬದುಕು ಆರಂಭವಾಗಿತ್ತು. ಆ ಹೊತ್ತಿಗೆ ಗೋಡೆಯವರು ಪುರುಷ ಪಾತ್ರಗಳನ್ನು ಮಾಡಲು ಆರಂಭಿಸಿಯಾಗಿತ್ತು. ಚಂದ್ರಹಾಸ, ಶ್ರೀಕೃಷ್ಣ ಮೊದಲಾದ ಪಾತ್ರಗಳನ್ನು ಮಾಡಿದ್ದರು. ಎರಡು ವರ್ಷ ಶಂಭು ಹೆಗಡೆಯವರ ಜತೆ ತಿರುಗಾಟ. ನೆಬ್ಬೂರು ಭಾಗವತರು, ಕೆರೆಮನೆಯ ಶಿವರಾಮ ಹೆಗಡೆ, ಮಹಾಬಲ ಹೆಗಡೆ, ಶಂಭು ಹೆಗಡೆ, ಗಜಾನನ ಹೆಗಡೆಯವರ ಒಡನಾಟವು ಸಿಕ್ಕಿತ್ತು. 1975ರಲ್ಲಿ ಅಮೃತೇಶ್ವರೀ ಮೇಳಕ್ಕೆ ಉಪ್ಪೂರರ ಭಾಗವತಿಕೆ. 1979ರಲ್ಲಿ ಶಂಭು ಹೆಗಡೆಯವರ ಕೋರಿಕೆಯಂತೆ ಇಡಗುಂಜಿ ಮೇಳಕ್ಕೆ. ಆಗ ಶಿವರಾಮ ಹೆಗಡೆಯವರು ನಿವೃತ್ತರಾಗಿದ್ದರು. ಆರು ವರ್ಷಗಳ ವ್ಯವಸಾಯ ಇಡಗುಂಜಿ ಮೇಳದಲ್ಲಿ. ಬಳಿಕ ಒಂದು ವರ್ಷ ಪೆರ್ಡೂರು ಮೇಳದಲ್ಲಿ. ಮತ್ತೆ ಒಂದು ವರ್ಷ ಮುಲ್ಕಿ ಮೇಳದಲ್ಲಿ (ಬಡಗು ಮೇಳ). ಬಳಿಕ ಮೂರು ವರ್ಷ ಪುರ್ಲೆ ಶ್ರೀ ರಾಮಚಂದ್ರ ಹೆಗಡೆಯವರ ಶಿರಸಿ ಪಂಚಲಿಂಗೇಶ್ವರ ಮೇಳದಲ್ಲಿ ವ್ಯವಸಾಯ. ಮತ್ತೆ ನಾಲ್ಕು ವರ್ಷ ಶಿರಿಯಾರ ಮುದ್ದಣ್ಣ ಶೆಟ್ರ ನೇತೃತ್ವದ ಶಿರಸಿ ಮಾರಿಕಾಂಬಾ ತಂಡದಲ್ಲಿ ಕಲಾಸೇವೆ. ಶಂಭು ಹೆಗಡೆ ಮತ್ತು ಚಿಟ್ಟಾಣಿಯವರ ಜತೆ ಗೋಡೆ ಅವರ ವೇಷಗಳನ್ನು ಪ್ರೇಕ್ಷಕರು ಬಹುವಾಗಿ ಮೆಚ್ಚಿಕೊಂಡಿದ್ದರು. ಶಂಭು ಹೆಗಡೆಯವರ ಕಾರ್ತವೀರ್ಯನಿಗೆ ರಾವಣ, ನಿರ್ಯಾಣದ ರಾಮನಿಗೆ ಲಕ್ಷ್ಮಣನಾಗಿ, ಶಲ್ಯ ಸೇನಾಧಿಪತ್ಯದ ಕರ್ಣನಿಗೆ ಶಲ್ಯನಾಗಿ, ಭಸ್ಮಾಸುರನಿಗೆ ಈಶ್ವರನಾಗಿ ಅಭಿನಯ. ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಜತೆ ಗದಾಯುದ್ಧದ ಕೌರವನಿಗೆ ಭೀಮನಾಗಿ, ಕೃಷ್ಣಾರ್ಜುನ ಕಾಳಗದ ಅರ್ಜುನನಿಗೆ ಶ್ರೀಕೃಷ್ಣನಾಗಿ ಅಭಿನಯಿಸಿದ್ದರು. ಈ ಸಂದರ್ಭದಲ್ಲಿ ಈ ಮೂವರು ಶ್ರೇಷ್ಠ ಕಲಾವಿದರು ಪಾತ್ರಗಳನ್ನು ಅದಲುಬದಲು ಮಾಡಿಕೊಂಡೂ ಅಭಿನಯಿಸಿದ್ದಾರೆ. ಕೆರೆಮನೆ, ಗೋಡೆ, ಚಿಟ್ಟಾಣಿಯವರು ಮಹಾನ್ ಪ್ರತಿಭೆಗಳು ಅನ್ನೋದಕ್ಕೆ ಇದುವೇ ಸಾಕ್ಷಿ. ಕಲಾರತ್ನತ್ವಯರು ಎನ್ನಬಹುದು. ಕಳೆದ ವರ್ಷದಿಂದ ಯಕ್ಷಗಾನ ಕ್ಷೇತ್ರದಿಂದ ದೂರವಾಗಿ ವಿಶ್ರಾಂತ ಬದುಕನ್ನು ನಡೆಸುತ್ತಿದ್ದಾರೆ. ಭಾರತದ ನಾನಾ ಕಡೆ ಅಲ್ಲದೆ ಬಹ್ರೈನ್ನಲ್ಲೂ ನಡೆದ ಪ್ರದರ್ಶಗಳಲ್ಲಿ ಭಾಗವಹಿಸಿರುತ್ತಾರೆ. ಅಮೇರಿಕಾ ಪ್ರವಾಸಕ್ಕೆ ಬೇಡಿಕೆಯಿದ್ದರೂ ವೀಸಾ ಸಮಸ್ಯೆಯಿಂದಾಗಿ ಅವಕಾಶವಾಗಿರಲಿಲ್ಲ. ಸುಮಾರು ಇಪ್ಪತ್ತೈದು ಪ್ರಶಸ್ತಿಗಳನ್ನು ಪಡೆದ ಗೋಡೆ ನಾರಾಯಣ ಹೆಗಡೆಯವರು ಮುನ್ನೂರಕ್ಕೂ ಮಿಕ್ಕಿದ ಸನ್ಮಾನಗಳನ್ನೂ ಸ್ವೀಕರಿಸಿರುತ್ತಾರೆ. 2012ರಲ್ಲಿ ರಾಜ್ಯ ಪ್ರಶಸ್ತಿಯೂ ಒಲಿದು ಬಂದಿದೆ. ಕಲಾಬದುಕಿನ ಸಂದರ್ಭ ಸುಮಾರು ಐವತ್ತು ಮಂದಿಗೆ ತರಬೇತಿಯನ್ನೂ ನೀಡಿದ್ದಾರೆ. ಡಿ.ಜಿ. ಹೆಗಡೆ, ಶಿರಳಗಿ ಭಾಸ್ಕರ ಜೋಷಿ, ಶಿರಳಗಿ ತಿಮ್ಮಪ್ಪ ಹೆಗಡೆ ಇವರಲ್ಲಿ ಪ್ರಮುಖರು. 1975ರಲ್ಲಿ ಲಕ್ಷ್ಮೀ ಅವರ ಜತೆ ವಿವಾಹ. ಗೋಡೆ ಶ್ರೀ ನಾರಾಯಣ ಹೆಗಡೆ ಮತ್ತು ಶ್ರೀಮತಿ ಲಕ್ಷ್ಮೀದಂಪತಿಗಳಿಗೆ ಐದು ಮಂದಿ ಮಕ್ಕಳು (3 ಹೆಣ್ಣು ಮತ್ತು 2 ಗಂಡು). ಹಿರಿಯ ಪುತ್ರಿ ವತ್ಸಲಾ ವಿವಾಹಿತೆ. ಹಿರಿಯ ಪುತ್ರ ಪ್ರಶಾಂತ್ ಹೆಗಡೆ ಕೃಷಿಕರು. ದ್ವಿತೀಯ ಪುತ್ರ ಪ್ರಸಾದ್ ಹೆಗಡೆ ಗೋಳಿಗರಡಿ ಮೇಳದ ಭಾಗವತರು. ಸಾಸ್ತಾನದಲ್ಲಿ ವಾಸ್ತವ್ಯ). ದ್ವಿತೀಯ ಪುತ್ರಿ ಭವ್ಯಾ ಹೆಗಡೆ ವಿವಾಹಿತೆ. ತೃತೀಯ ಪುತ್ರಿ ದಿವ್ಯಾ ಹೆಗಡೆ ವಿವಾಹಿತೆ. ಬಡಗುತಿಟ್ಟಿನ ಅತ್ಯಂತ ಹಿರಿಯ, ಅತ್ಯುತ್ತಮ ಕಲಾವಿದರಾದ ಗೋಡೆ ಶ್ರೀ ನಾರಾಯಣ ಹೆಗಡೆಯವರು ಪ್ರಸ್ತುತ ಶಿರಸಿ ಸಮೀಪದ ಬೂದಿಮರಡು ಎಂಬಲ್ಲಿ ಕೃಷಿಯೊಂದಿಗೆ ವಿಶ್ರಾಂತ ಜೀವನವನ್ನು ನಡೆಸುತ್ತಿದ್ದಾರೆ. ಮುಂದಿನ ಬದುಕು ಸುಖ, ನೆಮ್ಮದಿ, ಸಂತೋಷಗಳೆಂಬ ಪಾಕಗಳಿಂದ ಕೂಡಿ ಸುಂದರವಾಗಿರಲಿ ಎಂಬ ಹಾರಯಿಕೆಗಳು. ು
- ರವಿಶಂಕರ್ ವಳಕ್ಕುಂಜ
Comments
Post a Comment