ಬಡಗಿನ ಅನುಭವೀ ಕಲಾವಿದ, ಸಂಘಟಕ - ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ
ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಅವರು ಬಡಗು ತಿಟ್ಟಿನ ಅನುಭವೀ ಹಿರಿಯ ಕಲಾವಿದರು. ಯಕ್ಷಗಾನ ಕ್ಷೇತ್ರದಲ್ಲಿ ಕಲಾವಿದನಾಗಿ ಇವರು ಸುಮಾರು ನಲುವತ್ತೈದು ವರ್ಷಗಳ ಅನುಭವವನ್ನು ಹೊಂದಿರುತ್ತಾರೆ. ಗುಂಡಬಾಳಾ, ಪೆರ್ಡೂರು, ಸಾಲಿಗ್ರಾಮ, ಶಿರಸಿ, ಬಚ್ಚಗಾರು, ಮಂದಾರ್ತಿ ಮೇಳಗಳಲ್ಲಿ ವ್ಯವಸಾಯವನ್ನು ಮಾಡಿದ ಇವರು ಶ್ರೇಷ್ಠ ಸಂಘಟಕರಾಗಿಯೂ ಗುರುತಿಸಿಕೊಂಡಿದ್ದಾರೆ. 1998ನೇ ಇಸವಿಯಲ್ಲಿ ವೀರಾಂಜನೇಯ ಯಕ್ಷಗಾನ ಮಿತ್ರ ಮಂಡಳಿ ಬಂಗಾರಮಕ್ಕಿ ಎಂಬ ಕಲಾ ಸಂಘಟನೆಯನ್ನು ಸ್ಥಾಪಿಸಿರುತ್ತಾರೆ. ಈ ಸಂಘಟನೆಯಡಿ ದಕ್ಷಿಣೋತ್ತರ ಜಿಲ್ಲೆಗಳಲ್ಲಿ, ಮುಂಬಯಿ, ಬೆಂಗಳೂರು, ಹೈದರಾಬಾದ್ ಮೊದಲಾದ ನಗರಗಳಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ಏರ್ಪಡಿಸುತ್ತಾ ಬಂದಿರುತ್ತಾರೆ. ಈ ಸಂಸ್ಥೆಯ ನಾಯಕನಾಗಿ ವಿದೇಶ ಯಾತ್ರೆಯನ್ನು ಕೈಗೊಂಡು ಬಹರೇನ್ ನಲ್ಲಿ ಪ್ರದರ್ಶನಗಳಲ್ಲೂ ಭಾಗವಹಿಸಿರುತ್ತಾರೆ. ಶ್ರೀಯುತರು ಬಡಗುತಿಟ್ಟಿನ ಖ್ಯಾತ ಕಲಾವಿದರಾಗಿ ಮೆರೆದ ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಸುಪುತ್ರರು. ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಅವರ ಹುಟ್ಟೂರು ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮದ ಚಿಟ್ಟಾಣಿ ಕೇರಿ. ಪ್ರಸ್ತುತ ಇವರು ನಗರ ಬಸ್ತಿಕೇರಿ ಗ್ರಾಮದ ಮೊಗೆಹಳ್ಳ ಎಂಬಲ್ಲಿ ವಾಸವಾಗಿದ್ದಾರೆ. 1962ನೇ ಇಸವಿ ಮಾರ್ಚ್ 25ರಂದು ಚಿಟ್ಟಾಣಿ ಶ್ರೀ ರಾಮಚಂದ್ರ ಹೆಗಡೆ ಮತ್ತು ಶ್ರೀಮತಿ ಸುಶೀಲಾ ಅಮ್ಮ ದಂಪತಿಗಳ ಪುತ್ರನಾಗಿ ಜನನ. ಚಿಟ್ಟಾಣಿ ಅವರ ಮೂವರು ಪುತ್ರರಲ್ಲಿ ಇವರೇ ಹಿರಿಯರು.