ಪರಂಪರೆಯ ಸಂಪ್ರದಾಯವನ್ನು ಮುರಿಯದೆ ಮೆರೆದ ಶ್ರೇಷ್ಠ ಭಾಗವತ ನೆಬ್ಬೂರು ನಾರಾಯಣ ಭಾಗವತರು
ನೆಬ್ಬೂರು ಶ್ರೀ ನಾರಾಯಣ ದೇವರು ಹೆಗಡೆಯವರು ಬಡಗಿನ ಶ್ರೇಷ್ಠ ಭಾಗವತರುಗಳಲ್ಲೊಬ್ಬರು. ಪ್ರಸಿದ್ಧಿಗಾಗಿ ಬಾಗದೆ ಪರಂಪರೆ ಸಂಪ್ರದಾಯವನ್ನು ಮುರಿಯದೆ ಭಾಗವತರಾಗಿ ಮೆರೆದವರು. ಇವರ ಹಾಡುಗಾರಿಕೆಯು ಬಡಗುತಿಟ್ಟಿನ ಯಕ್ಷಗಾನಕ್ಕೆ ಒಂದು ವಿಶೇಷ ಕೊಡುಗೆ ಎಂದೇ ಕಲಾಭಿಮಾನಿಗಳು ಗುರುತಿಸಿದ್ದಾರೆ. ಕಲಾವಿದರ ನಟನಾ ಸಾಮರ್ಥ್ಯವನ್ನು ಹೊರಗೆಡಹುವಲ್ಲಿ ಮತ್ತು ಹೆಚ್ಚಿಸುವಲ್ಲಿ ಇವರ ಹಾಡುಗಾರಿಕೆಯು ಅತ್ಯಂತ ಸಹಕಾರಿಯಾಗಿರುತ್ತಿತ್ತು ಎಂಬುದು ಎಲ್ಲರೂ ಒಪ್ಪಿಕೊಂಡ ವಿಚಾರ. ಘಟ್ಟದ ಮೇಲಿನಿಂದ ಭಾಗವತಿಕೆಯನ್ನು ಕಲಿಯಲೆಂದೇ ಕೆಳಗಿಳಿದು ಕೆರೆಮನೆಯತ್ತ ಸಾಗಿದವರು. ಪ್ರಸಿದ್ಧ ರಂಗನಟ ಶ್ರೀ ಇಡಗುಂಜಿ ಮೇಳದ ಸಂಸ್ಥಾಪಕ ಕೆರೆಮನೆ ಶ್ರೀ ಶಿವರಾಮ ಹೆಗಡೆಯವರಿಂದ ಅವರ ಮನೆಯಲ್ಲಿದ್ದುಕೊಂಡೇ ಕಲಿತರು. ಸದಾ ಅಧ್ಯಯನಶೀಲರಾಗಿ ಅಂದಿನ ಶ್ರೇಷ್ಠ ಕಲಾವಿದರ ಒಡನಾಟದಿಂದ ಬೆಳೆಯುತ್ತಾ ಮುಂದೆ ಸಾಗಿದರು. ನೆಬ್ಬೂರು ನಾರಾಯಣ ಭಾಗವತರು ಇಡಗುಂಜಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ (ಕೆರೆಮನೆ ಮೇಳ) ಪ್ರಧಾನ ಭಾಗವತರಾಗಿ ಸುಮಾರು ಐವತ್ತು ವರ್ಷಗಳ ಕಾಲ ಉತ್ತರ ಕನ್ನಡ, ದಕ್ಷಿಣ ಕನ್ನಡ, ಕಾಸರಗೋಡು ಪ್ರದೇಶಗಳಲ್ಲಿ ನಡೆದ ಪ್ರದರ್ಶನಗಳ ಯಶಸ್ಸಿಗೆ ಕಾರಣರಾದವರು. ಹೊರರಾಜ್ಯಗಳ ಪ್ರೇಕ್ಷಕರಿಗೆ ಗಾನಸುಧೆಯನ್ನು ಉಣಿಸಿದರು. ವಿದೇಶಗಳಲ್ಲಿ ನಡೆದ ಅನೇಕ ಪ್ರದರ್ಶನಗಳಲ್ಲಿ ಭಾಗವಹಿಸಿ ಅಂತಾರಾಷ್ಟ್ರೀಯ ಭಾಗವತರಾಗಿ ನೆಬ್ಬೂರು ನಾ