ಸಹೃದಯಿ ಕಲಾಕುಸುಮ ಶ್ರೀ ಕೃಷ್ಣ ಮೂಲ್ಯ ಕೈರಂಗಳ
ಯಕ್ಷಗಾನ ನಮ್ಮ ಹೆಮ್ಮೆಯ ಸಂಕೇತವಾದ ಒಂದು ಶ್ರೇಷ್ಠ ಕಲೆ. ಅದು ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಮೇರುಕಲೆ. ಆರೋಗ್ಯಕರವಾದ ಸಮಾಜ ನಿರ್ಮಾಣ, ವ್ಯಕ್ತಿ ನಿರ್ಮಾಣಕ್ಕೆ ಯಾವ ಉತ್ತಮ ಗುಣಗಳು ಬೇಕು? ರೂಢಿಸಿಕೊಳ್ಳ ಬೇಕೆಂಬುದನ್ನು ತಿಳಿಸುತ್ತದೆ. ಸನಾತನಿಗಳು ನೀಡಿದ ಸಂದೇಶಗಳನ್ನು ಅತ್ಯಂತ ಸರಳವಾಗಿ ನಮಗೆ ಯಕ್ಷಗಾನವು ನೀಡುತ್ತದೆ. ದೈವೀಕಲೆ ಯಾದ ಯಕ್ಷಗಾನವು ಉತ್ತಮ ವಿಚಾರಗಳನ್ನು ವಾಹಿಸುವ ಒಂದು ಅತ್ಯುತ್ತಮ ಮಾಧ್ಯಮವೂ ಹೌದು. ಯಾವುದು ಒಳ್ಳೆಯ ವಿಚಾರ? ಯಾವುದು ಕೆಟ್ಟ ವಿಚಾರ? ಏನನ್ನು ಮಾಡಬಹುದು? ಏನನ್ನು ಮಾಡಬಾರದು? ಮಾಡಬಾರದ್ದನ್ನು ಮಾಡಿದರೆ ಕೆಟ್ಟ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ಒಳಿತನ್ನು ಮಾಡಿದರೆ ದೇವತಾನುಗ್ರಹಕ್ಕೆ ಪಾತ್ರರಾಗುತ್ತೇವೆ. ಯಕ್ಷಗಾನ ಪ್ರದರ್ಶನಗಳನ್ನು ನೋಡಿದಾಗ ನಮಗೆ ಈ ವಿಚಾರಗಳನ್ನು ಗ್ರಹಿಸುವುದಕ್ಕೆ ಸಾಧ್ಯವಾಗುತ್ತದೆ. ಕಲಾವಿದರು ಪಾತ್ರಗಳ ಸ್ವಭಾವವನ್ನರಿತು ಅಭಿನಯಿಸಿ ಈ ಸಂದೇಶಗಳನ್ನು ಕಲಾಭಿಮಾನಿಗಳಿಗೆ ನೀಡುತ್ತಾರೆ. ಹಾಗಾಗಿಯೇ ಕಲಾವಿದರು ಕಲಾಮಾತೆಯ ಸೇವಕರು. ಸುಪುತ್ರರು. ಉತ್ತಮ ಕಲಾವಿದ ಕಲಾಮಾತೆಯ ಅನುಗ್ರಹಕ್ಕೆ ಪಾತ್ರನಾಗಿಯೇ ಆಗುತ್ತಾನೆ. ವಿದ್ವಾಂಸರಿಂದ, ಕಲಾಭಿಮಾನಿಗಳಿಂದ ಗೌರವಿಸಲ್ಪಡುತ್ತಾನೆ. ಕಾಲವನ್ನು ನಿರ್ಣಯಿಸುವ ಹಕ್ಕು ನಮಗಿಲ್ಲ. ಕಾಯಬೇಕು ಅಷ್ಟೆ. ದುಡಿಯುವುದು ಕಲಾವಿದನಿಗೆ ಕರ್ತವ್ಯ. ಪ್ರತಿಫಲವನ್ನು ನೀಡುತ್ತಾನೆ ದೇವರು. ನಿಷ್ಠೆಯಿಂದ ದುಡಿದು ಕಲಾಮಾತ