‘ಕದ್ರಿ ವಿಷ್ಣು’ ಪ್ರಶಸ್ತಿ ವಿಜೇತ ಮಾಡಾವು ಕೊರಗಪ್ಪ ರೈ
ಶ್ರೀ ಮಾಡಾವು ಕೊರಗಪ್ಪ ರೈ ಪ್ರಸ್ತುತ ಕಟೀಲು ಮೇಳದಲ್ಲಿ ವ್ಯವಸಾಯ ಮಾಡುತ್ತಿರುವ ಯಕ್ಷಗಾನ ಕಲಾವಿದ. ಮೃದು ಮನಸ್ಸಿನ, ವಿನಯವಂತ, ಹೆಚ್ಚು ಮಾತನಾಡುವವರಲ್ಲ. ಕೆಲವು ಪ್ರಶ್ನೆಗಳಿಗೆ ನಗುವೇ ಇವರ ಉತ್ತರ. ತೆರೆದುಕೊಳ್ಳುವ ಸ್ವಭಾವ ಇವರದಲ್ಲ. ಯಾವಾಗಲೂ ಮುಚ್ಚಿಕೊಳ್ಳುವ ಸ್ವಭಾವ. ಅತಿರೇಕಗಳಿಗೆ ಎಡೆಕೊಡದ ಕಾರಣವೇ ಈ ಉತ್ತಮ ಕಲಾವಿದ ಪ್ರಸಿದ್ಧಿಯಿಂದ ದೂರ ಉಳಿದರೇನೋ? ಎಂದೆನಿಸಿದರೆ ತಪ್ಪಾಗಲಾರದು. ಸ್ವಭಾವವನ್ನರಿತು, ಹಿತಮಿತವಾದ ಮಾತು, ಕುಣಿತಗಳಿಂದ ಪಾತ್ರಕ್ಕೆ ಜೀವ ತುಂಬುವ ಮಾಡಾವು ಕೊರಗಪ್ಪಣ್ಣನವರ ಬಗ್ಗೆ ಬರೆಯುವುದು ಕಲಾಭಿಮಾನಿಗಳೆಲ್ಲರಿಗೂ ಸಂತಸ ತರುವ ವಿಚಾರ. ಶ್ರೀ ಮಾಡಾವು ಕೊರಗಪ್ಪ ರೈಗಳು 26-12-1955ರಂದು ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಸಣಂಗಲ ನಡುಮನೆಯಲ್ಲಿ ಮಹಾಬಲ ರೈ, ಶ್ರೀಮತಿ ಕಮಲ ಎಂ. ರೈ ದಂಪತಿಗಳಿಗೆ ಮಗನಾಗಿ ಜನಿಸಿದರು. ಪ್ರಾಥಮಿಕ ವಿದ್ಯಾರ್ಜನೆಯನ್ನು ಕೆಯ್ಯೂರು ಶಾಲೆಯಲ್ಲಿ ಪೂರೈಸಿದರು (7ನೇ ತರಗತಿ). ಎಳವೆಯಲ್ಲೇ ಯಕ್ಷಗಾನದತ್ತ ಆಕರ್ಷಿತರಾದರು. ಶಾಲಾದಿನಗಳಲ್ಲಿ ಪುತ್ತೂರು ಪರಿಸರದಲ್ಲಿ ನಡೆಯುತ್ತಿದ್ದ ಪ್ರದರ್ಶನಗಳನ್ನು ತಪ್ಪದೆ ನೋಡುತ್ತಿದ್ದರಂತೆ. ಕಲಾವಿದನಾಗಬೇಕೆಂಬ ಆಸೆಯು ಸಹಜವಾಗಿ ಎಳೆಮನಸ್ಸಿನಲ್ಲಿ ಚಿಗುರೊಡೆಯಿತು. ನಾಟ್ಯಾಭ್ಯಾಸಕ್ಕೆ ಶ್ರೀ ಧರ್ಮಸ್ಥಳ ಲಲಿತಕಲಾ ಕೇಂದ್ರವನ್ನು ಸೇರಿಕೊಂಡರು (1971). ಶ್ರೀ ಪಡ್ರೆ ಚಂದು ಅವರಿಂದ ನಾಟ್ಯ