ಬಡಗುತಿಟ್ಟಿನ ಸವ್ಯಸಾಚಿ ಕಲಾವಿದ ಶ್ರೀ ಅಶೋಕ ಭಟ್ ಸಿದ್ಧಾಪುರ
ಶ್ರೀ ಅಶೋಕ ಭಟ್ ಸಿದ್ಧಾಪುರ ಅವರು ಬಡಗುತಿಟ್ಟಿನ ಶ್ರೇಷ್ಠ ಕಲಾವಿದರಲ್ಲೊಬ್ಬರು. ಎಲ್ಲಾ ತೆರನಾದ ಪಾತ್ರಗಳನ್ನು ನಿರ್ವಹಿಸಬಲ್ಲ ಅನುಭವಿಗಳು. ಪಾತ್ರೋಚಿತವಾಗಿ ಅಭಿನಯಿಸುವ ಕಲೆಯನ್ನು ಸಿದ್ಧಿಸಿಗೊಂಡವರು. 1980ನೆಯ ಇಸವಿಯಿಂದ ತೊಡಗಿ ಸುಮಾರು ಮೂವತ್ತೊಂಬತ್ತು ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಸವ್ಯಸಾಚಿಯಾಗಿ, ಅತ್ಯುತ್ತಮ ಪೋಷಕ ಪಾತ್ರಧಾರಿಯಾಗಿ ಕಲಾಸೇವೆಯನ್ನು ಮಾಡುತ್ತಿದ್ದಾರೆ. ತೆರೆದು ಕಾಣಿಸಿಕೊಳ್ಳುವ ಸ್ವಭಾವವನ್ನು ಹೊಂದಿದವರಲ್ಲ. ಪ್ರಚಾರದಿಂದ ಯಾವತ್ತೂ ಬಲುದೂರ ಉಳಿಯುತ್ತಾರೆ. ತನ್ನ ಪ್ರತಿಭಾ ವ್ಯವಹಾರದಿಂದಲೇ ರಂಗದಲ್ಲಿ ಅಭಿನಯಿಸಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪಾತ್ರವನ್ನು ಧರಿಸಿ ರಂಗಪ್ರವೇಶಿಸಿದ ತಕ್ಷಣ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಕಲೆಯು ಇವರಿಗೆ ಕರಗತ. ಕಲಾಬದುಕನ್ನು ಹಳ್ಳಿಯಿಂದ ಆರಂಭಿಸಿದರೂ ಕೊಂಡದಕುಳಿಯವರ ತಂಡದ ಸದಸ್ಯನಾಗಿ ಸಿಂಗಾಪುರ್, ದುಬಾೈ, ಕುವೈಟ್, ಶಾರ್ಜಾಗಳಲ್ಲಿ ತನ್ನ ಪ್ರತಿಭೆಯನ್ನು ಮೆರೆಸಿದ ಕಲಾವಿದರಿವರು. ಅಶೋಕ ಭಟ್ ಸಿದ್ಧಾಪುರ ಶ್ರೀ ಅಶೋಕ್ ಭಟ್ ಅವರು 1961ನೇ ಇಸವಿ ಡಿಸೆಂಬರ್ ಹದಿನೇಳರಂದು ಈ ಲೋಕದ ಬೆಳಕನ್ನು ಕಂಡವರು. ಇವರು ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಹೊನ್ನೆಗುಂಡಿ. ಶ್ರೀ ತಿಮ್ಮಣ್ಣ ಭಟ್ಟ ಮತ್ತು ಶ್ರೀಮತಿ ಯಶೋದಾ ದಂಪತಿಗಳ ಪುತ್ರರಿವರು.