ಅಸುರ ಪಾತ್ರಗಳಲ್ಲಿ ಅಬ್ಬರಿಸಿದ ಅಪ್ರತಿಮ ಕಲಾಕಾರ ಶ್ರೀ ಸಂಜೀವ ಚೌಟ, ಉದ್ಯಾವರ ಮಾಡ
ಅನುಭವಗಳನ್ನು ಗಳಿಸಿ ಹಂತ ಹಂತವಾಗಿ ಬೆಳೆದು ಮುಂಭಡ್ತಿಗೊಂಡು ಸ್ಥಾನಗಳನ್ನು ಪಡೆಯುವುದು ಎಲ್ಲಾ ಕ್ಷೇತ್ರಗಳಲ್ಲಿ ನಡೆಯುವ ಸಹಜವಾದ ಕ್ರಿಯೆಯು. ಕೆಳಸ್ಥರಗಳಲ್ಲಿ ಪಡೆದ ಅನುಭವಗಳೇ ಮುಂದೆ ಎದುರಾಗುವ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ ಎಂಬುದರಿಂದ ಈ ವ್ಯವಸ್ಥೆಯು ಸರಿಯಾದುದೇ ಆಗಿದೆ. ಯಕ್ಷಗಾನದಲ್ಲೂ ಇದೇ ರೀತಿಯ ನಿಯಮಗಳಿತ್ತು ಎಂಬುದನ್ನು ನಾವು ಕೇಳಿರುತ್ತೇವೆ. ಪೂರ್ವರಂಗ, ಸ್ತ್ರೀವೇಷ, ಪುಂಡುವೇಷ, ಪೀಠಿಕೆವೇಷ ಎದುರು ವೇಷ ಎಂಬ ಹಂತಗಳನ್ನು ದಾಟಿ ಬಂದವರು ಬಣ್ಣದ ವೇಷಧಾರಿಯಾಗುತ್ತಾರೆ. ಬಣ್ಣದ ವೇಷಗಳನ್ನು ನಿರ್ವಹಿಸಿ ಯಶಸ್ವಿಯಾದ ಮೇಲೆ ಅವರಿಗೆ ಹಾಸ್ಯಗಾರ ಸ್ಥಾನವು ದೊರಕುತ್ತಿತ್ತು. ಇದು ಪರಿವರ್ತನಾಶೀಲವಾದ ಪ್ರಪಂಚ. ಎಲ್ಲ ಕ್ಷೇತ್ರಗಳಲ್ಲೂ ಬದಲಾವಣೆಯನ್ನು ಕಾಣಬಹುದು. ದೇಶ, ಕಾಲಕ್ಕೆ ತಕ್ಕಂತಹ ಬದಲಾವಣೆಯನ್ನು ನಾವು ಆಕ್ಷೇಪಿಸದೆ ಸ್ವಾಗತಿಸಲೇಬೇಕಾಗುತ್ತದೆ. ಇಂದು ಯಕ್ಷಗಾನದಲ್ಲಿ ಕಲಾವಿದರಿಗೆ ಅವರವರ ಆಸಕ್ತಿಯನ್ನು ಹೊಂದಿ ಆಯ್ಕೆಗೆ ಅವಕಾಶಗಳಿವೆ. ಏನೇ ಇರಲಿ, ಕಲಾವಿದನು ಸ್ಥಾನವನ್ನು ಹೇಗೆ ಗಿಟ್ಟಿಸಿಕೊಂಡ ಎಂಬುದು ಮುಖ್ಯವಲ್ಲ. ನಾವು ಧರಿಸಿದ ಪಾತ್ರಕ್ಕೆ, ಕಲೆಗೆ ಅಪಚಾರವಾಗದಂತೆ ಅಭಿನಯಿಸುವ ಕಲೆಯನ್ನು ಹೊಂದಿರುವುದು ಮುಖ್ಯ. ಯಕ್ಷಗಾನ ಎಂಬ ಮೇರು ಕಲೆಗೆ ಯಾವತ್ತೂ ಕೊರತೆಯಾಗಬಾರದು ಎಂಬ ಎಚ್ಚರದಿಂದ ಪಾತ್ರಗಳನ್ನು ನಿರ್ವಹಿಸಿದರೆ ಆತ ಕಲಾವಿದನಾಗಿ ಯಶಸ್ವಿಯಾಗುತ್ತಾನೆ. ಹಿಂದಿನ ಕಾಲದಲ್ಲಿ ಅನೇಕರು ಹಂತಹಂತವಾಗಿ ಬೆಳೆದೇ