ಶ್ರೇಷ್ಠ ಮದ್ದಳೆಗಾರ ಮಣಿಮುಂಡ ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿ
ಅನುಪಮವಾದ ಶ್ರೇಷ್ಠವಾದ ಕಲೆ ನಮ್ಮ ಹೆಮ್ಮೆಯ ಯಕ್ಷಗಾನ. ಆಟ, ಕೂಟಗಳಲ್ಲಿ ‘ಹಿಮ್ಮೇಳ’ ಮತ್ತು ‘ಮುಮ್ಮೇಳ’ ಎಂಬ ಎರಡು ವಿಭಾಗಗಳು. ಹಿಮ್ಮೇಳ ಪ್ರಧಾನವೋ? ಮುಮ್ಮೇಳ ಪ್ರಧಾನವೋ? ಎಂದು ಕೆಲವರು ಪ್ರಶ್ನಿಸುವುದುಂಟು. ಯಕ್ಷಗಾನವು ಒಂದು ಸಮಷ್ಠಿಕಲೆ. ಎಲ್ಲವೂ ಪ್ರಧಾನವೆ. ತಂಡವಾಗಿ ಶ್ರಮಿಸಿದಾಗ ಮಾತ್ರ ಪ್ರದರ್ಶನವು ರಂಜಿಸುವುದು. ಈ ಸಂದರ್ಭದಲ್ಲಿ ಹಿರಿಯ ಶ್ರೇಷ್ಠ ಮದ್ದಳೆಗಾರರಾದ ಶ್ರೀ ಪದ್ಯಾಣ ಶಂಕರನಾರಾಯಣ ಭಟ್ಟರ ಮಾತುಗಳು ನೆನಪಾಗುತ್ತದೆ. ‘‘ಯಶಸ್ವಿ ಪ್ರದರ್ಶನಕ್ಕೆ ಬೇಕು... ಹಿಮ್ಮೇಳ ಮುಮ್ಮೇಳಗಳ ಸಾಂಗತ್ಯ’’ ಎಂಬ ತಲೆಬರಹದಡಿಯಲ್ಲಿ ಲೇಖನವೊಂದನ್ನು ಯಕ್ಷದೀಪ ಪತ್ರಿಕೆಗಾಗಿ ಬರೆದಿದ್ದರು. ಈ ಲೇಖನದಲ್ಲಿ ಭಾಗವತನ, ಮದ್ದಳೆಗಾರನ, ವೇಷಧಾರಿಗಳ ಸ್ಥಾನ ಮತ್ತು ಕರ್ತವ್ಯಗಳನ್ನು ಸರಳವಾಗಿ ಮನಮುಟ್ಟುವಂತೆ ಅವರು ತಿಳಿಯಪಡಿಸಿದ್ದಾರೆ. ಯಕ್ಷಗಾನಕ್ಕೆ ಭಾಗವತರೇ ನಿರ್ದೇಶಕರು. ಅವರ ನಡೆಯನ್ನು ವಾದಕರು ಅನುಸರಿಸುತ್ತಾರೆ. ಅವರನ್ನು ಅನುಸರಿಸಿ ವೇಷಧಾರಿಗಳು ಕುಣಿಯುತ್ತಾರೆ, ಹಾಡಿನ ನಂತರ ಅದರೊಳಗಿರುವ ವಿಚಾರಗಳನ್ನು ಮಾತಿನ ಮೂಲಕ ಪ್ರಕಟಿಸುತ್ತಾರೆ. ಹಾಗಾಗಿ ಮುಮ್ಮೇಳಕ್ಕಿಂತ ಹಿಮ್ಮೇಳವೇ ಪ್ರಧಾನವಾದುದು. ಭಾಗವತರ, ಮದ್ದಳೆಗಾರರ ಸ್ಥಾನವು ಶ್ರೇಷ್ಠವಾದುದು. ವೇಷಧಾರಿಗಳು ರಂಗಪ್ರವೇಶ ಮಾಡುವಾಗ ಅವರಿಗೆ ನಮಸ್ಕರಿಸಿ ಬರುವುದನ್ನು ನಾವು ಕಾಣುತ್ತೇವೆ. ರಂಗವನ್ನು ಪ್ರವೇಶಿಸಿದ ನಂತರ ಸಭಾವಂದನೆಯನ್ನು ಮಾಡುತ್ತಾರೆ. ಮುಮ್ಮೇಳ ಕಲ